ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯದಲ್ಲೂ ವಿರಾಟ್ ಕೊಹ್ಲಿ ಸೊನ್ನೆ ಸುತ್ತಿದ್ದಾರೆ. ಹಾಗಿದ್ದರೂ ಔಟಾಗಿ ಹೋಗುವಾಗ ಬ್ಯಾಟ್ ಮೇಲೆತ್ತಿ ಪೆವಿಲಿಯನ್ ಗೆ ತೆರಳಿದ್ದಾರೆ. ಇದಕ್ಕೆ ಕಾರಣವೂ ಇದೆ.
ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದ ಕೊಹ್ಲಿ ಎರಡನೇ ಪಂದ್ಯದಲ್ಲಾದರೂ ಚೆನ್ನಾಗಿ ಆಡಬಹುದು ಎಂದು ಎಲ್ಲರೂ ನಿರೀಕ್ಷೆಯಿಟ್ಟುಕೊಂಡಿದ್ದರು. ಆದರೆ 4 ಎಸೆತ ಎದುರಿಸಿದ ಅವರು ಬಾರ್ಟ್ಲೆಟ್ ಎಸೆತದಲ್ಲಿ ಎಲ್ ಬಿಡಬ್ಲ್ಯು ಆದರು. ಇದರೊಂದಿಗೆ ಇದೇ ಮೊದಲ ಬಾರಿಗೆ ಸತತ ಎರಡು ಇನಿಂಗ್ಸ್ ಗಳಲ್ಲಿ ಶೂನ್ಯಕ್ಕೆ ಔಟಾದ ಬೇಡದ ದಾಖಲೆ ಬರೆದರು.
ಕೊಹ್ಲಿ ಕ್ರೀಸ್ ಗೆ ಬಂದಾಗ ಪ್ರೇಕ್ಷಕರು ಭಾರೀ ಹರ್ಷೋದ್ಘಾರದೊಂದಿಗೆ ಸ್ವಾಗತಿಸಿದ್ದರು. ಆದರೆ ಅವರ ನಿರೀಕ್ಷೆಯನ್ನು ಕೊಹ್ಲಿ ಹುಸಿಗೊಳಿಸಿದ್ದಾರೆ. ಕೊಹ್ಲಿ ಔಟಾಗಿದ್ದು ಮೈದಾನದಲ್ಲಿ ಅವರ ಬ್ಯಾಟಿಂಗ್ ನೋಡಲು ಕೂತಿದ್ದ ಸಾಕಷ್ಟು ಪ್ರೇಕ್ಷಕರಿಗೆ ತೀವ್ರ ನಿರಾಸೆಯಾಯಿತು. ಹೀಗಾಗಿ ಕೊಹ್ಲಿ ಔಟಾದಾಗ ಇಡೀ ಮೈದಾನ ಸ್ತಬ್ಧವಾಗಿತ್ತು. ಪ್ರೇಕ್ಷಕರ ಈ ಪ್ರೀತಿಗೆ ಕೊಹ್ಲಿ ಪೆವಿಲಿಯನ್ ಗೆ ಮರಳುವಾಗ ಬ್ಯಾಟ್ ಮೇಲೆತ್ತಿ ಪ್ರೇಕ್ಷಕರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಇನ್ನು, ಪಂದ್ಯದ ವಿಚಾರಕ್ಕೆ ಬರುವುದಾದರೆ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಟೀಂ ಇಂಡಿಯಾ ಇಂದು ಎರಡು ಪ್ರಮುಖ ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದೆ. ಇತ್ತೀಚೆಗಿನ ವರದಿ ಬಂದಾಗ 13 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 41 ರನ್ ಗಳಿಸಿದೆ. ಪರಿಸ್ಥಿತಿಗೆ ತಕ್ಕಂತೆ ನಿಧಾನಗತಿಯಲ್ಲಿ ಆಡುತ್ತಿರುವ ರೋಹಿತ್ ಶರ್ಮಾ 51 ಎಸೆತಗಳಲ್ಲಿ 25 ರನ್ ಗಳಿಸಿದ್ದರೆ ಶ್ರೇಯಸ್ ಅಯ್ಯರ್ 10 ರನ್ ಗಳಿಸಿ ಆಡುತ್ತಿದ್ದಾರೆ. ನಾಯಕ ಶುಭಮನ್ ಗಿಲ್ 9 ರನ್ ಗಳಿಗೆ ವಿಕೆಟ್ ಒಪ್ಪಿಸಿದ್ದಾರೆ.