Publish Date: Mon, 27 Nov 2023 (09:00 IST)
Updated Date: Mon, 27 Nov 2023 (09:15 IST)
ನವದೆಹಲಿ: ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಹೀರೋ ಆಗಿದ್ದ ಕ್ರಿಕೆಟಿಗ ಮೊಹಮ್ಮದ್ ಶಮಿ ಇದೀಗ ಜೀವನದಲ್ಲೂ ಒಬ್ಬರ ಜೀವವುಳಿಸಿ ಹೀರೋ ಆಗಿದ್ದಾರೆ.
ನಾನಿತಾಲ್ ಬಳಿ ಗುಡ್ಡಗಾಡು ಪ್ರದೇಶದಲ್ಲಿ ಪ್ರಪಾತಕ್ಕೆ ಬಿದ್ದ ಕಾರಿನಲ್ಲಿ ಸಿಲುಕಿಕೊಂಡ ವ್ಯಕ್ತಿಯನ್ನು ಮೊಹಮ್ಮದ್ ಶಮಿ ಮತ್ತು ಗೆಳೆಯರು ರಕ್ಷಿಸಿದ್ದಾರೆ. ಈ ವಿಡಿಯೋವನ್ನು ಸ್ವತಃ ಅವರೇ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದರು.
ಮೊಹಮ್ಮದ್ ಶಮಿಯ ಈ ಮಾನವೀಯತೆಯ ಗುಣಕ್ಕೆ ನೆಟ್ಟಿಗರು ಫಿದಾ ಆಗಿದ್ದು, ಒಬ್ಬರ ಜೀವವುಳಿಸಿದ್ದಕ್ಕೆ ಅಭಿನಂದಿಸುತ್ತಿದ್ದಾರೆ. ಅಷ್ಟಕ್ಕೂ ಶಮಿಗೆ ಪ್ರಪಾತಕ್ಕೆ ಬಿದ್ದಿದ್ದ ವ್ಯಕ್ತಿ ಕಣ್ಣಿಗೆ ಬಿದ್ದಿದ್ದು ಹೇಗೆ ಗೊತ್ತಾ?
ಅಪಘಾತಕ್ಕೀಡಾದ ವ್ಯಕ್ತಿಯ ಕಾರು ಮೊಹಮ್ಮದ್ ಶಮಿಯ ಕಾರಿನ ಮುಂದೆಯೇ ಚಲಿಸುತ್ತಿತ್ತು. ಆದರೆ ಗುಡ್ಡಗಾಡು ಪ್ರದೇಶದಲ್ಲಿ ಕಾರು ನಿಯಂತ್ರಣಕ್ಕೆ ಸಿಗದೇ ಪ್ರಪಾತಕ್ಕುರುಳಿದೆ. ತಮ್ಮ ಕಣ್ಣೆದುರೇ ಈ ಘಟನೆ ನಡೆದಿದ್ದು ಶಮಿ ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಅದೃಷ್ಟವಶಾತ್ ಕಾರಿನಲ್ಲಿದ್ದ ವ್ಯಕ್ತಿಗೆ ಗಂಭೀರ ಗಾಯವಾಗಿರಲಿಲ್ಲ. ಹೀಗಾಗಿ ತಾವೇ ಖುದ್ದಾಗಿ ಪ್ರಥಮ ಚಿಕಿತ್ಸೆ ಮಾಡಿ ಆತನನ್ನು ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಅವರ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.