ಬೆಂಗಳೂರು: ಕರ್ನಾಟಕ ಚಿತ್ರರಂಗದ ಅಭಿನಯ ಭಾರ್ಗವ ಸಾಹಸಸಿಂಹ ಡಾ ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ನೀಡಬೇಕು ಎಂದು ಒತ್ತಾಯಗಳು ಹೆಚ್ಚಾಗಿದೆ. ಇಂದು ಸಿಎಂ ಸಿದ್ದರಾಮಯ್ಯನವನರನ್ನು ಭಾರತಿ ವಿಷ್ಣುವರ್ಧನ್ ಭೇಟಿ ಮಾಡಲಿದ್ದಾರೆ.
ನಿನ್ನೆಯಷ್ಟೇ ಹಿರಿಯ ನಟಿಯರಾದ ಜಯಮಾಲ, ಮಾಳವಿಕಾ ಅವಿನಾಶ್, ಶ್ರುತಿ ಕೃಷ್ಣ ಸಿಎಂ ಅವರನ್ನು ಭೇಟಿ ಮಾಡಿ ವಿಷ್ಣುವರ್ಧನ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸುವಂತೆ ಲಿಖಿತ ರೂಪದಲ್ಲಿ ಮನವಿ ಸಲ್ಲಿಸಿದ್ದಾರೆ.
ಇದಕ್ಕೆ ಮೊದಲು ಸ್ವತಃ ವಿಷ್ಣುವರ್ಧನ್ ಕುಟುಂಬದವರಾದ ಅಳಿಯ, ನಟ ಅನಿರುದ್ಧ ಜತ್ಕರ್ ಎರಡು ಬಾರಿ ಸಿಎಂ ಭೇಟಿ ಮಾಡಿ ಕರ್ನಾಟಕ ರತ್ನ ನೀಡುವಂತೆ ಮನವಿ ಸಲ್ಲಿಸಿದ್ದರು. ಇಂದು ಭಾರತಿ ವಿಷ್ಣುವರ್ಧನ್ ಅವರು ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಸಮಾಧಿ ಇದ್ದ ಜಾಗದಲ್ಲಿ ಅಭಿಮಾನಿಗಳಿಗೆ ನಮನ ಸಲ್ಲಿಸಲು 10 ಗುಂಟೆ ಸ್ಥಳ ನೀಡುವಂತೆ ಮನವಿ ಸಲ್ಲಿಸಲು ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡುತ್ತಿದ್ದಾರೆ.
ಈ ವೇಳೆ ಅವರೂ ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಮನವಿ ಸಲ್ಲಿಸುವ ಸಾಧ್ಯತೆಯಿದೆ. ಸೆಪ್ಟೆಂಬರ್ 18 ರಂದು ಸಾಹಸಸಿಂಹ ವಿಷ್ಣುವರ್ಧನ್ ಹುಟ್ಟುಹಬ್ಬವಿದ್ದು ಈ ಬಾರಿ ಹಲವು ಸಿಹಿ ಸುದ್ದಿಗಳ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.