ದುಬೈ: ಏಷ್ಯಾ ಕಪ್ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ಭಾರತೀಯ ಸೇನೆಯನ್ನು ಅಣಕಿಸುವ ಸಂಜ್ಞೆ ಮಾಡಿದ್ದ ಪಾಕಿಸ್ತಾನ ಕ್ರಿಕೆಟಿಗರಿಗೆ ತಕ್ಕ ಪಾಠ ಕಲಿಸಲು ಬಿಸಿಸಿಐ ಮುಂದಾಗಿದೆ.
ಭಾರತದ ವಿರುದ್ಧ ಸೂಪರ್ ಫೋರ್ ಪಂದ್ಯದ ವೇಳೆ ಪಾಕಿಸ್ತಾನಿ ಕ್ರಿಕೆಟಿಗರು ಅತಿರೇಕದ ವರ್ತನೆ ತೋರಿದ್ದರು. ಆಪರೇಷನ್ ಸಿಂಧೂರ್ ವಿಚಾರವನ್ನು ಕೆದಕಿದ್ದರು. ಪಾಕ್ ಬೌಲರ್ ಹ್ಯಾರಿಸ್ ರೌಫ್ ನಾವು 6 ರಫೇಲ್ ಜೆಟ್ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದೇವೆ ಎಂದು ಸಂಜ್ಞೆ ಮಾಡಿದ್ದರು. ಫರ್ಹಾನ್ ಬ್ಯಾಟ್ ನ್ನು ಗನ್ ನಂತೆ ಹಿಡಿದು ಅರ್ಧಶತಕ ಸಂಭ್ರಮಿಸಿದ್ದರು.
ಈ ವರ್ತನೆ ಭಾರತೀಯ ಸೇನೆಯನ್ನು ಅಣಕಿಸುವಂತೆ ಇತ್ತು. ಇದು ಭಾರತೀಯರನ್ನು ಕೆರಳಿಸಿದೆ. ಈ ಕಾರಣಕ್ಕೆ ಬಿಸಿಸಿಐ ಈಗ ಪಾಕ್ ಆಟಗಾರರ ವಿರುದ್ಧ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಗೆ ದೂರು ನೀಡಿದೆ. ಇದಕ್ಕೆ ವಿಡಿಯೋ ಸಮೇತ ಸಾಕ್ಷಿ ನೀಡಿರುವ ಬಿಸಿಸಿಐ ಈ ಇಬ್ಬರು ಆಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.