ದುಬೈ: ಭಾರತ ಗೆದ್ದಿರುವ ಏಷ್ಯಾ ಕಪ್ ಟ್ರೋಫಿಯನ್ನು ಹೊತ್ತೊಯ್ದ ಎಸಿಸಿ ಅಧ್ಯಕ್ಷ ಪಾಕಿಸ್ತಾನದ ಮೊಹ್ಸಿನ್ ನಖ್ವಿಗೆ ಬಿಸಿಸಿಐ ಇಂದು ಸಭೆಯಲ್ಲೇ ಬೆವರಿಳಿಸಿದೆ.
ಇಂದು ಎಸಿಸಿ ಸಭೆಯಲ್ಲಿ ಮೊಹ್ಸಿನ್ ನಖ್ವಿಗೆ ಬಿಸಿಸಿಐ ಅಧಿಕಾರಿಗಳು ಸರಿಯಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ. ಪಾಕಿಸ್ತಾನವನ್ನು ಸೋಲಿಸಿದ್ದ ಟೀಂ ಇಂಡಿಯಾ ಏಷ್ಯಾ ಕಪ್ ಚಾಂಪಿಯನ್ ಆಗಿತ್ತು. ಆದರೆ ಪಾಕಿಸ್ತಾನದವರಾದ ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿತ್ತು. ಈ ಕಾರಣಕ್ಕೆ ನಖ್ವಿ ಟ್ರೋಫಿ ಮತ್ತು ಭಾರತೀಯ ಆಟಗಾರರಿಗೆ ಕೊಡಬೇಕಾದ ಮೆಡಲ್ ಗಳನ್ನು ಹೊತ್ತೊಯ್ದಿದ್ದರು.
ಇದೀಗ ಎಸಿಸಿ ಸಭೆಯಲ್ಲಿ ಭಾಗಿಯಾದ ಬಿಸಿಸಿಐ ಖಜಾಂಜಿ ಆಶಿಶ್ ಶೆಲ್ಲರ್ ಮತ್ತು ಎಸಿಸಿಯಲ್ಲಿ ಭಾರತದ ಸದಸ್ಯರಾಗಿರುವ ರಾಜೀವ್ ಶುಕ್ಲಾ ಬಿರುಸಾಗಿ ಮಾತನಾಡಿದ್ದಾರೆ. ಸಭೆಯಲ್ಲಿ ಇಂದು ಮೊಹ್ಸಿನ್ ನಖ್ವಿ ಮತ್ತು ಬಿಸಿಸಿಐ ಅಧಿಕಾರಿಗಳ ನಡುವೆ ಮಾತಿನ ಚಕಮಕಿಯೇ ನಡೆದಿದೆ.
ಈ ವೇಳೆ ಬಿಸಿಸಿಐ ಸದಸ್ಯರು ತಕ್ಷಣವೇ ಟ್ರೋಫಿ ಮತ್ತು ಮೆಡಲ್ ಗಳನ್ನು ಭಾರತಕ್ಕೆ ಹಿಂದುರುಗಿಸಬೇಕು. ಇಲ್ಲದೇ ಹೋದರೆ ಐಸಿಸಿಗೆ ದೂರು ನೀಡುವುದಾಗಿ ನೇರವಾಗಿ ಎಚ್ಚರಿಕೆ ನೀಡಿದ್ದಾರೆ. ಆಗ ಮೊಹ್ಸಿನ್ ಖಾನ್ ಟ್ರೋಫಿ ನನ್ನಿಂದ ಸ್ವೀಕರಿಸಲ್ಲ ಎಂಬ ವಿಚಾರವನ್ನು ಅಧಿಕೃತವಾಗಿ ಬಿಸಿಸಿಐ ನನಗೆ ಮಾಹಿತಿ ನೀಡಿರಲಿಲ್ಲ. ನನ್ನನ್ನು ಮೈದಾನದಲ್ಲಿ ಕಾರ್ಟೂನ್ ನಂತೆ ನಿಲ್ಲಿಸಿ ಅವಮಾನಿಸಲಾಗಿದೆ ಎಂದಿದ್ದಾರೆ.
ಆಗ ಕೋಪಗೊಂಡ ರಾಜೀವ್ ಶುಕ್ಲಾ ಟ್ರೋಫಿ ನಿಮ್ಮ ವೈಯಕ್ತಿಕ ಸೊತ್ತಲ್ಲ. ಅದು ಎಸಿಸಿಗೆ ಸೇರಿದ್ದು. ಯಾರು ವಿಜೇತರಿರುತ್ತಾರೆ ಅವರಿಗೆ ಅರ್ಹವಾಗಿ ಅದನ್ನು ನೀಡಬೇಕು ಎಂದು ತಿರುಗೇಟು ನೀಡಿದ್ದಾರೆ. ಕೊನೆಗೆ ಯಾವುದೇ ತೀರ್ಮಾನವಾಗದೇ ಈ ಎಸಿಸಿ ಸಭೆ ಕೊನೆಗೊಂಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇದೀಗ ಬಿಸಿಸಿಐ ಈ ವಿಚಾರವಾಗಿ ಐಸಿಸಿಗೆ ದೂರು ನೀಡಲಿದೆ.