Publish Date: Sun, 26 Nov 2023 (06:40 IST)
Updated Date: Sun, 26 Nov 2023 (07:10 IST)
ಮುಂಬೈ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಭವಿಷ್ಯದ ಬಗ್ಗೆ ಚರ್ಚಿಸಲು ಟೀಂ ಇಂಡಿಯಾ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಜೊತೆ ಸಭೆ ನಡೆಯಲಿದೆ.
ರೋಹಿತ್ ಶರ್ಮಾ ಮುಂದಿನ ದಿನಗಳಲ್ಲಿ ಏಕದಿನ ಮಾದರಿಯಿಂದಲೂ ದೂರ ಸರಿಯಲಿದ್ದಾರೆ ಎಂಬ ಮಾತು ದಟ್ಟವಾಗಿದೆ. ಅತ್ತ ಕೋಚ್ ರಾಹುಲ್ ದ್ರಾವಿಡ್ ಕೂಡಾ ಕೋಚ್ ಹುದ್ದೆಯಲ್ಲಿ ಮುಂದುವರಿಯಲು ಆಸಕ್ತಿ ತೋರಿಸಿಲ್ಲ ಎನ್ನಲಾಗಿದೆ. ಹಾಗಿದ್ದರೂ ಇಬ್ಬರೂ ಇದುವರೆಗೆ ತಮ್ಮ ನಿರ್ಧಾರಗಳನ್ನು ಅಧಿಕೃತವಾಗಿ ಹೇಳಿಕೊಂಡಿಲ್ಲ.
ಹೀಗಾಗಿ ಅಜಿತ್ ಅಗರ್ಕರ್ ಡಿಸೆಂಬರ್ 2 ಅಥವಾ 3 ರಂದು ಮುಂಬೈನಲ್ಲಿ ರೋಹಿತ್, ದ್ರಾವಿಡ್ ಜೊತೆ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಬಹುಶಃ ಅಜಿತ್ ಅಗರ್ಕರ್ ರೋಹಿತ್ ಗೆ ಏಕದಿನ ಮಾದರಿಯಿಂದ ದೂರವುಳಿಯಲು ಸಲಹೆ ನೀಡಬಹುದು. ಅಥವಾ ದ್ರಾವಿಡ್ ಗೆ ಕೋಚ್ ಹುದ್ದೆಯಲ್ಲಿ ಇನ್ನು ಕೆಲವು ದಿನ ಮುಂದುವರಿಯಲು ಸಲಹೆ ನೀಡಬಹುದು.
ಜೂನ್ ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ವರೆಗೆ ದ್ರಾವಿಡ್ ಕೋಚ್ ಆಗಿ ಮುಂದುವರಿಯಲಿ ಎಂಬ ಒತ್ತಾಯ ಕೇಳಿಬರುತ್ತಿದೆ. ಹಾಗಿದ್ದರೂ ಅವರು ಈಗಾಗಲೇ ಐಪಿಎಲ್ ತಂಡದ ಕೋಚ್ ಆಗಲು ಆಸಕ್ತಿ ತೋರಿದ್ದು, ಮುಂದುವರಿಯುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಹೀಗಾಗಿ ಡಿಸೆಂಬರ್ 2 ಅಥವಾ 3 ರಂದು ನಡೆಯಲಿರುವ ಈ ಸಭೆಯಲ್ಲಿ ಇಬ್ಬರ ಭವಿಷ್ಯವೂ ನಿರ್ಧಾರವಾಗಲಿದೆ.