Publish Date: Sun, 01 Oct 2017 (07:08 IST)
Updated Date: Sun, 01 Oct 2017 (07:10 IST)
ನಾಗ್ಪುರ: ಒಂದು ಪಂದ್ಯದಲ್ಲಿ ಸಿಕ್ಕಿದ್ದ ನಂ.1 ಪಟ್ಟವನ್ನು ಮತ್ತೊಂದು ಪಂದ್ಯದಲ್ಲಿ ಕಳೆದುಕೊಂಡ ಟೀಂ ಇಂಡಿಯಾ ಇದೀಗ ಮಗದೊಂದು ಪಂದ್ಯದಲ್ಲಿ ಮತ್ತೆ ಅಗ್ರ ಸ್ಥಾನ ಮರಳಿ ಪಡೆಯುವ ತವಕದಲ್ಲಿದೆ.
ಇಂದು ಕಿತ್ತಳೆಯ ನಾಡು ನಾಗ್ಪುರದಲ್ಲಿ ಐದನೇ ಮತ್ತು ಅಂತಿಮ ಏಕದಿನ ಪಂದ್ಯ ನಡೆಯಲಿದ್ದು, ಗೆಲುವಿನೊಂದಿಗೆ ಸರಣಿಗೆ ಮಂಗಳ ಹಾಡಲು ಟೀಂ ಇಂಡಿಯಾ ಸಜ್ಜಾಗಿದೆ.
ಕಳೆದ ಪಂದ್ಯದಲ್ಲಿ ಅನಿರೀಕ್ಷಿತವಾಗಿ ಸೋತು ಏಕದಿನ ಮಾದರಿಯಲ್ಲಿ ನಂ.1 ಸ್ಥಾನ ಕಳೆದುಕೊಂಡಿದ್ದ ಟೀಂ ಇಂಡಿಯಾಗೆ ಮತ್ತೆ ದ. ಆಫ್ರಿಕಾದಿಂದ ಆ ಸ್ಥಾನವನ್ನು ಮರಳಿ ಪಡೆಯುವ ನಿರೀಕ್ಷೆಯಿದೆ.
ಕಳೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ಬ್ಯಾಟ್ಸ್ ಮನ್ ಗಳು ಮರಳಿ ಲಯಕ್ಕೆ ಬಂದವರಂತೆ ಆಡಿದ್ದು ನೋಡಿದರೆ ಈ ಪಂದ್ಯ ಭಾರತಕ್ಕೆ ಸುಲಭ ತುತ್ತಲ್ಲ ಎನ್ನುವುದು ಸ್ಪಷ್ಟ. ಟೀಂ ಇಂಡಿಯಾ ತನ್ನ ಆಡುವ ಬಳಗದಲ್ಲಿ ಇದುವರೆಗೆ ಆಡದ ಆಟಗಾರರಿಗೆ ಮಣೆ ಹಾಕಿದರೆ ಕನ್ನಡಿಗ ಕೆಎಲ್ ರಾಹುಲ್ ಗೆ ಅವಕಾಶ ಸಿಗುವುದೇನೋ ಎಂದು ಕಾದು ನೋಡಬೇಕಿದೆ.
ಚಿನ್ನಸ್ವಾಮಿ ಮೈದಾನದಂತೆ ಇದು ಕೂಡಾ ಮೊದಲು ಬ್ಯಾಟಿಂಗ್ ಮಾಡಿದವರಿಗೆ ಸ್ವರ್ಗವೆನಿಸಲಿದೆ. ಹಾಗಾಗಿ ಇಂದು ಟಾಸ್ ಗೆದ್ದವನೇ ಬಾಸ್ ಆಗುವ ಸಾಧ್ಯತೆ ಹೆಚ್ಚು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ