Publish Date: Mon, 26 Aug 2024 (08:42 IST)
Updated Date: Mon, 26 Aug 2024 (08:49 IST)
Photo Credit: Bing AI generated
ಬೆಂಗಳೂರು: ಇಂದು ಕೃಷ್ಣ ಜನ್ಮಾಷ್ಠಮಿಯನ್ನು ಬಹಳ ಶ್ರದ್ಧಾ ಭಾವದಿಂದ ಎಲ್ಲೆಡೆ ಆಚರಿಸಲಾಗುತ್ತಿದೆ. ಕೃಷ್ಣ ಜನ್ಮಾಷ್ಠಮಿಯ ಪೂಜೆಯನ್ನು ಯಾವ ಸಮಯದಲ್ಲಿ ಮಾಡಿದರೆ ಸೂಕ್ತ ಎಂದು ಇಲ್ಲಿದೆ ವಿವರ.
ವಸುದೇವ-ದೇವಕಿಯ ಪುತ್ರನಾಗಿ ಮಹಾವಿಷ್ಣುವೇ ಕೃಷ್ಣನ ರೂಪದಲ್ಲಿ ಜನ್ಮ ತಾಳಿದ್ದು ಮಧ್ಯರಾತ್ರಿ 12 ಗಂಟೆಗೆ. ಅದೂ ಕಂಸನ ಸೆರೆ ಮನೆಯಲ್ಲಿ. ವಿಶೇಷವೆಂದರೆ ಆಗ ಎಲ್ಲರೂ ಅದೇನೋ ಮಾಯೆಗೊಳಗಾದವರಂತೆ ಗಾಢ ನಿದ್ರೆಗೆ ಜಾರಿದ್ದರಂತೆ. ದೇವಕಿಯ 8 ನೇ ಪುತ್ರನಿಂದಲೇ ತನ್ನ ಮೃತ್ಯು ಎಂಬ ಕಾರಣಕ್ಕೆ ಸೋದರ ಮಾವ ಕಂಸ ಅವನನ್ನು ಕೊಲ್ಲಲು ಕಾಯುತ್ತಿದ್ದ. ಆದರೆ ಕೃಷ್ಣ ಹುಟ್ಟಿದ ಸಂದರ್ಭದಲ್ಲಿ ಯಾರಿಗೂ ಎಚ್ಚರವಿರಲಿಲ್ಲವಂತೆ.
ಅವನನ್ನು ಆ ತಡರಾತ್ರಿ ಧಾರಾಕಾರ ಮಳೆಯಲ್ಲಿ ವಸುದೇವ ಹೊತ್ತುಕೊಂಡು ಹೋಗಿ ವೃಂದಾವನಕ್ಕೆ ಬಿಟ್ಟು ಬರುತ್ತಾನೆ. ಅಲ್ಲಿ ಕೃಷ್ಣನ ಬಾಲ ಲೀಲೆಗಳು, ರಕ್ಕಸರೊಂದಿಗಿನ ಪ್ರತಿನಿತ್ಯದ ಹೋರಾಟ ನಡೆಯುತ್ತಲೇ ಇರುತ್ತದೆ. ಮುಂದೆ ಕೃಷ್ಣ ಬೇಡನ ಬಾಣಕ್ಕೆ ಪ್ರಾಣ ಬಿಡುವಲ್ಲಿವರೆಗೆ ಅವನ ಬದುಕಿನ ಪ್ರತಿಯೊಂದು ಹಂತವೂ ನಮಗೆ ಎಂದೆಂದಿಗೂ ಪಾಠವೇ.
ಕೃಷ್ಣ ಹುಟ್ಟಿದ್ದು ಮಧ್ಯರಾತ್ರಿಯಾಗಿರುವುದರಿಂದ ಅವನ ಪೂಜೆಗೆ ಮಧ್ಯರಾತ್ರಿಯೇ ಸೂಕ್ತ ಸಮಯವಾಗಿದೆ. ತಡರಾತ್ರಿ 12 ಗಂಟೆಗೆ ಕೃಷ್ಣ ಜನ್ಮಾಷ್ಠಮಿಯನ್ನು ಆಚರಣೆ ಮಾಡಲಾಗುತ್ತದೆ. ಅವನ ಜನ್ಮದಿನ ಕೇವಲ ಪೂಜೆಗೆ ಸೀಮಿತವಾಗಿರುವುದಿಲ್ಲ. ಕೋಲಾಟ, ಮಡಕೆ ಒಡೆಯುವುದು ಇತ್ಯಾದಿ ವಿನೋದಾವಳಿಗಳಿಗೂ ಸಂದರ್ಭವಾಗಿರುತ್ತದೆ. ಜಗದೋದ್ದಾರಕ ನಮ್ಮ ಕೃಷ್ಣನ ಜನ್ಮದಿನಕ್ಕೆ ನಮಗೆಲ್ಲರಿಗೂ ಶುಭಾಶಯಗಳು.