Publish Date: Fri, 10 May 2024 (08:44 IST)
Updated Date: Fri, 10 May 2024 (08:46 IST)
ಬೆಂಗಳೂರು: ಇಂದು ಅಕ್ಷಯ ತೃತೀಯದ ಶುಭದಿನವಾಗಿದ್ದು ಎಲ್ಲಾ ರೀತಿಯ ಶುಭ ಕೆಲಸಗಳಿಗೆ, ಸಮಾರಂಭಗಳಿಗೆ, ಚಿನ್ನ ಖರೀದಿಗೆ ಇಂದು ಶುಭ ದಿನವಾಗಿರುತ್ತದೆ.
ಪ್ರತೀ ವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ದಿನವನ್ನು ಅಕ್ಷಯ ತೃತೀಯ ದಿನವಾಗಿ ಆಚರಿಸಲಾಗುತ್ತದೆ. ಈ ದಿನ ಚಿನ್ನ ಖರೀದಿ ಮಾಡಿದರೆ ಮನೆಯಲ್ಲಿ ನಗ-ನಗದು ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ. ಇತ್ತೀಚೆಗಂತೂ ಇದು ತೀರಾ ವ್ಯಾವಹಾರಿಕ ಲಾಭದ ದೃಷ್ಟಿಯಿಂದ ಅತೀ ಹೆಚ್ಚು ಪ್ರಚಾರ ಪಡೆಯುತ್ತಿದೆ.
ಧಾರ್ಮಿಕ ನಂಬಿಕೆಗಳ ಪ್ರಕಾರ ಇಂದು ಮದುವೆ, ಗೃಹಪ್ರವೇಶ, ನಾಮಕರಣ ಇತ್ಯಾದಿ ಶುಭ ಸಮಾರಂಭಗಳಿಗೆ ಯಾವುದೇ ಮುಹೂರ್ತ ಬೇಕಾಗಿಲ್ಲ. ಇಂದು ಬೆಳಿಗ್ಗೆ 4.17 ಕ್ಕೆ ಅಕ್ಷಯ ತೃತೀಯ ಮುಹೂರ್ತ ಆರಂಭವಾಗಿ ನಾಳೆ ಮುಂಜಾನೆ 2.49 ಕ್ಕೆ ಕೊನೆಗೊಳ್ಳುತ್ತದೆ. ಈ ದಿನ ಯಾವುದೇ ಸಮಯದಲ್ಲಿ ಬೇಕಾದರೂ ಚಿನ್ನ ಖರೀದಿ ಮಾಡಬಹುದು.
ಹಿಂದೂ ಪುರಾಣದ ನಂಬಿಕೆ ಪ್ರಕಾರ ಇಂದು ಯಾವುದೇ ಶುಭ ಕೆಲಸಗಳನ್ನು ಮಾಡಿದರೂ ಅದರ ಫಲ ನಿಮಗೆ ಲಭಿಸುವುದು. ಯಾವುದೇ ವಸ್ತು ಖರೀದಿಸಿದರೂ ಮನೆಯಲ್ಲಿ ಸಮೃದ್ಧಿಯಾಗುವುದು. ಈ ದಿನ ಬಡವರು, ದೀನರಿಗೆ ದಾನ ಮಾಡಿದರೆ ಮಹಾವಿಷ್ಣುವು ಸಂತೃಪ್ತನಾಗಿ ನಿಮಗೆ ವರವನ್ನು ಕರುಣಿಸುತ್ತಾನೆ ಎಂಬುದು ನಂಬಿಕೆ.