Publish Date: Tue, 23 Apr 2024 (08:50 IST)
Updated Date: Tue, 23 Apr 2024 (17:07 IST)
ಬೆಂಗಳೂರು: ಇಂದು ಹನುಮಾನ ಜಯಂತಿಯಾಗಿದ್ದು ಹಿಂದೂ ಭಕ್ತರು ಶ್ರದ್ಧಾ ಭಕ್ತಿಯಿಂದ ಆಂಜನೇಯ ಸ್ವಾಮಿಯನ್ನು ಆರಾಧಿಸುತ್ತಿದ್ದಾರೆ. ಈ ದಿನಕ್ಕೆ ಆಂಜನೇಯ ಸ್ವಾಮಿಯ ವಿಶೇಷ ಗುಣವೊಂದರ ಬಗ್ಗೆ ತಿಳಿದುಕೊಳ್ಳೋಣ.
ತ್ರೇತಾಯುಗದಲ್ಲಿ ಪ್ರಭು ಶ್ರೀರಾಮಚಂದ್ರನ ಬಲಗೈ ಬಂಟನಾಗಿ ರಾಕ್ಷಸ ರಾವಣನ ಸಂಹಾರ ಮಾಡುವಲ್ಲಿ ಆಂಜನೇಯನ ಪಾತ್ರ ಬಹಳ ದೊಡ್ಡದು. ರಾಮನ ಸಹೋದರ ಲಕ್ಷ್ಮಣನಿಗಾಗಿ ಪರ್ವತವನ್ನೇ ಎತ್ತಿ ತಂದವನು. ಮಹಾನ್ ಶಕ್ತಿವಂತ ಆಂಜನೇಯ ಸ್ವಾಮಿ. ಆದರೆ ಅವನ ದೊಡ್ಡ ಕೊರತೆಯೆಂದರೆ ಅವನ ಶಕ್ತಿ ಏನೆಂದು ಸದಾ ಅವನಿಗೆ ಯಾರಾದರೂ ನೆನಪಿಸುತ್ತಿರಬೇಕು.
ಯುದ್ಧಕಾಲದಲ್ಲಿ, ಅನಿವಾರ್ಯ ಸಂದರ್ಭದಲ್ಲಿ ಹನುಮಂತನಿಗೆ ತನ್ನ ಶಕ್ತಿಯೇನೆಂದು ಮರೆತುಹೋಗುತ್ತದೆ. ಇದಕ್ಕೆ ಅವನಿಗೆ ಸಿಕ್ಕ ಋಷಿ ಶಾಪವೇ ಕಾರಣ. ಹನುಮಂತ ಚಿಕ್ಕವನಿಂದಲೇ ಮಹಾನ್ ತುಂಟ. ಸೂರ್ಯನನ್ನೇ ಹಿಡಿದಿಟ್ಟುಕೊಂಡ ಮಹಾನ್ ತುಂಟ. ಇದೇ ತುಂಟತನ ಅವನಿಗೆ ಶಾಪವಾಯ್ತು.
ಇದೇ ರೀತಿ ಋಷಿಗಳೊಬ್ಬರ ಜೊತೆ ಹನುಮಂತ ತನ್ನ ತುಂಟ ಬುದ್ಧಿ ತೋರಿದ್ದ. ಇದರಿಂದ ಋಷಿಗಳ ತಪೋಭಂಗವಾಗಿತ್ತು. ಇದರಿಂದ ಸಿಟ್ಟಿಗೆದ್ದ ಅವರು ಹನುಮಂತನಿಗೆ ಮುಂದೆ ಅಗತ್ಯ ಸಂದರ್ಭದಲ್ಲಿ ನಿನ್ನ ಶಕ್ತಿಯೇ ಮರೆತು ಹೋಗುವಂತಾಗಲಿ ಎಂದು ಶಾಪ ನೀಡಿದ್ದರಂತೆ. ಅದರಂತೆ ಹನುಮಂತನಿಗೆ ಆಗಾಗ ತನ್ನ ಶಕ್ತಿಯೇನೆಂದು ಇನ್ನೊಬ್ಬರು ನೆನಪಿಸುತ್ತಿರಬೇಕು.