Publish Date: Tue, 26 Mar 2024 (09:44 IST)
Updated Date: Tue, 26 Mar 2024 (09:54 IST)
ಬೆಂಗಳೂರು: ಹಿಂದೂ ನಂಬಿಕೆ ಪ್ರಕಾರ ಹಣವನ್ನು ಕೊಡುವವಳು ಲಕ್ಷ್ಮೀ ದೇವಿ. ಈ ದೇವಿಯ ಕೃಪಾಕಟಾಕ್ಷವಿಲ್ಲದೇ ನಮಗೆ ಐಶ್ವರ್ಯ, ಸಂಪತ್ತು ಸಿಗದು.
ಹಾಗಾಗಿ ಮನೆಯಲ್ಲಿ ಸಂಪತ್ತು ವೃದ್ಧಿಯಾಗಬೇಕು ಎಂದರೆ ಲಕ್ಷ್ಮೀ ದೇವಿಯನ್ನು ಪೂಜಿಸುವುದು ಅಗತ್ಯವಾಗಿದೆ. ಆಕೆಗೆ ಎಂದೂ ಅವಮಾನವಾಗುವ ರೀತಿಯಲ್ಲಿ ನಡೆದುಕೊಳ್ಳಬಾರದು. ಅದರಲ್ಲೂ ವಿಶೇಷವಾಗಿ ನಾವು ಮಾಡುವ ಕೆಲವೊಂದು ತಪ್ಪುಗಳಿಂದ ಲಕ್ಷ್ಮೀ ದೇವಿ ಮುನಿಸಿಕೊಳ್ಳಬಹುದು.
ಹಿಂದೂ ನಂಬಿಕೆ ಪ್ರಕಾರ ಮನೆಯಲ್ಲಿರುವ ಹೆಣ್ಣು ಮಕ್ಕಳನ್ನು ಗೌರವಿಸುವುದು ಎಂದರೆ ಸಾಕ್ಷಾತ್ ಲಕ್ಷ್ಮೀ ದೇವಿಯನ್ನು ಗೌರವಿಸಿದಂತೆ. ಮನೆಯ ಹೆಣ್ಣು ಮಕ್ಕಳ ಕಣ್ಣಲ್ಲಿ ನೀರು ಬರುವಂತೆ ಮಾಡಿದರೆ ಲಕ್ಷ್ಮೀ ದೇವಿ ನಮಗೆ ಒಲಿಯಲಾರಳು. ಜೊತೆಗೆ ಮನೆಯಲ್ಲಿ ಸಂಪತ್ತು ವೃದ್ಧಿಯಾಗಲಾರದು.
ಅದೇ ರೀತಿ ಯಾರೋ ಕಷ್ಟವೆಂದು ಬಂದಾಗ ಅವರ ಕಷ್ಟಕ್ಕೆ ಸ್ಪಂದಿಸದೇ ಹಣ ಕೊಡಲು ಜಿಪುಣತನ ಮಾಡಿದರೆ ನಮ್ಮನ್ನು ಲಕ್ಷ್ಮೀ ದೇವಿ ಕ್ಷಮಿಸಲಾರಳು. ಬಡವರಿಗೆ ದಾನ ಮಾಡಲು ಸಂಪತ್ತು ಬಳಸಿದರೆ ನಮಗೆ ಲಕ್ಷ್ಮೀ ದೇವಿ ಒಲಿದು ಐಶ್ವರ್ಯ ಅಭಿವೃದ್ಧಿಯಾಗುತ್ತದೆಯೇ ಹೊರತು ನಾಶವಾಗಲಾರದು ಎಂಬುದು ನಂಬಿಕೆ.