Publish Date: Fri, 06 Sep 2024 (08:43 IST)
Updated Date: Fri, 06 Sep 2024 (08:49 IST)
ಬೆಂಗಳೂರು: ಇಂದು ಗೌರಿ ಹಬ್ಬವಾಗಿದ್ದು, ಈ ದಿನ ಮುತ್ತೈದೆಯರಿಗೆ ಬಾಗಿನ ಕೊಡುವುದು ಸಂಪ್ರದಾಯ. ಆದರೆ ಬಾಗಿನ ಕೊಡುವಾಗ ಕೆಲವೊಂದು ಸಂಪ್ರದಾಯ ಪಾಲಿಸುವುದು ಅಗತ್ಯ.
ಗೌರಿ ಪೂಜೆಯ ನಂತರ ಮುತ್ತೈದೆಯರಿಗೆ ಬಾಗಿನ ಕೊಟ್ಟರೆ ಮುತ್ತೈದೆತನ ಗಟ್ಟಿಯಾಗುತ್ತದೆ ಎಂಬ ನಂಬಿಕೆಯಿದೆ. ಮೊರದೊಳಗೆ ಅಕ್ಕಿ, ಬೆಲ್ಲ, ಬಳೆ, ವೀಳ್ಯದೆಲೆ, ಅಡಿಕೆ, ಅರಶಿನ, ಕುಂಕು, ಹೂವು, ಹಣ್ಣು ಇತ್ಯಾದಿ ಶುಭ ವಸ್ತುಗಳನ್ನಿರಿಸಿ ಬಾಗಿನ ಕೊಡಲಾಗುತ್ತದೆ. ಇದರಿಂದ ಗೌರಿ ದೇವಿಯ ಅನುಗ್ರಹಕ್ಕೆ ಪಾತ್ರರಾಗುತ್ತೀರಿ.
ಆದರೆ ಬಾಗಿನ ಕೊಡುವಾಗ ಕೆಲವೊಂದು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಮುಖ್ಯವಾಗಿ ಬಾಗಿನ ತೆಗೆದುಕೊಳ್ಳುವಾಗ ಅಥವಾ ಕೊಡುವಾಗ ಯಾವ ದಿಕ್ಕಿಗೆ ಮುಖ ಮಾಡಿ ಕೂರಬೇಕು ಎನ್ನುವುದು ಮುಖ್ಯ. ಬಾಗಿನ ಕೊಡಲು ಮುತ್ತೈದೆಯನ್ನು ಪೂರ್ವ ಅಥವಾ ಪಶ್ಚಿಮದ ಕಡೆಗೆ ಮುಖ ಮಾಡಿ ಕುಳ್ಳಿರಿಸಬೇಕು.
ಬಳಿಕ ಅವರ ಅಂಗೈ ಮತ್ತು ಕಾಲುಗಳಿಗೆ ಅರಶಿನ ಹಚ್ಚಬೇಕು. ನಂತರ ಕುಂಕುಮ ಮತ್ತು ಹೂವನ್ನು ಕೊಡಬೇಕು. ಇದಾದ ಬಳಿಕ ಸೆರಗಿನಲ್ಲಿ ಬಾಗಿನವನ್ನು ಮುಚ್ಚಿ ಇಬ್ಬರೂ ಮೊರವನ್ನು ಅಲ್ಲಾಡಿಸಿ ಮುತ್ತೈದೆ ಮುತ್ತೈದೆ ಬಾಗಿನ ತಗೊ ಎನ್ನುತ್ತಾ ಬಾಗಿನ ಕೊಡಬೇಕು. ಪಡೆಯುವವರು ಮುತ್ತೈದೆ ಮುತ್ತೈದೆ ಬಾಗಿನ ಕೊಡು ಎನ್ನಬೇಕು. ಸೀರೆಯ ಸೆರಗಿನಲ್ಲಿ ಮಹಾಲಕ್ಷ್ಮಿಯು ಸೌಭಾಗ್ಯ ರೂಪದಲ್ಲಿರುತ್ತಾಳೆ. ಹೀಗಾಗಿ ಸೆರಗು ಮುಚ್ಚಿ ನೀಡಬೇಕು. ಬಾಗಿನ ಕೊಡುವುದು ಮತ್ತು ತೆಗೆದುಕೊಳ್ಳುವುದು ಸಮೃದ್ಧಿಯ ಸಂಕೇತವೂ ಹೌದು. ಇದರಿಂದ ಸಂಪತ್ತು ವೃದ್ಧಿಯಾಗುತ್ತದೆ.