Publish Date: Sun, 26 Dec 2021 (09:01 IST)
Updated Date: Sun, 26 Dec 2021 (10:00 IST)
ನೆಲಮಂಗಲ : ಬೆಂಗಳೂರು- ತುಮಕೂರು ರಸ್ತೆಯನ್ನು ಸಂಪರ್ಕಿಸುವ ನವಯುಗ ಮೇಲ್ಸೇತುವೆಯಲ್ಲಿ ಬಿರುಕು ಮೂಡಿದ ಹಿನ್ನೆಲೆ ವಾಹನ ಸಂಚಾರಕ್ಕೆ ನಿರ್ಬಂಧವನ್ನು ಹೇರಲಾಗಿದೆ.
ಟಿ.ದಾಸರಹಳ್ಳಿಯ ಬಳಿಯ ದೀಪಕ್ ಬಸ್ ನಿಲ್ದಾಣದ ಬಳಿ ಮೇಲ್ಸೇತುವೆ ಬಿರುಕು ಮೂಡಿದ ಪರಿಣಾಮ ಕಿಲೋಮಿಟರ್ಗಟ್ಟಲೇ ಟ್ರಾಫಿಕ್ ಜಾಮ್ ಆಗಿದೆ. ಇದರಿಂದ ವಾಹನ ಸವಾರರು ಹೈರಾಣು ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಮೇಲ್ಸೇತುವೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧವನ್ನು ಹೇರಿದ್ದು, ಸರ್ವಿಸ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶವನ್ನು ನೀಡಲಾಗಿದೆ.
ಸರ್ವಿಸ್ ರಸ್ತೆಯಲ್ಲೂ ವಿಪರೀತ ಟ್ರಾಫಿಕ್ ಜಾಮ್ ಆದ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ತುಮಕೂರು ಕಡೆಯಿಂದ ಬರುವವರು ಮಾದವಾರ ಬಳಿ ಬಲ ತಿರುವು ಪಡೆದು ನೈಸ್ ರಸ್ತೆ ಮೂಲಕ ನಗರ ಪ್ರವೇಶಕ್ಕೆ ಸೂಚನೆಯನ್ನು ನೀಡಲಾಗಿದೆ.
ಬೆಂಗಳೂರಿನಿಂದ ತುಮಕೂರು ಕಡೆ ಹೋಗುವವರು, ಗೊರಗುಂಟೆಪಾಳ್ಯದ ಸಿಎಂಟಿಐ ಜಂಕ್ಷನ್ ಬಳಿ ಎಡ ತಿರುವು ಪಡೆದು ಸುಮನಹಳ್ಳಿ, ಮಾಗಡಿ ರಸ್ತೆ ಮೂಲಕ ನೈಸ್ ರಸ್ತೆಯಿಂದ ಹೊರ ಹೋಗಲು ಸೂಚಿಸಲಾಗಿದೆ.