Publish Date: Sun, 22 May 2022 (17:20 IST)
Updated Date: Sun, 22 May 2022 (21:14 IST)
ಲಕ್ನೋ : ಉತ್ತರ ಪ್ರದೇಶದಲ್ಲಿ ಸ್ವಚ್ಛತೆ ಬಗ್ಗೆ ಹೆಚ್ಚಿನ ಗಮನ ಹರಿಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಿರ್ಧರಿಸಿದ್ದಾರೆ.
ಈ ನಿಟ್ಟಿನಲ್ಲಿ ಮನೆಯಲ್ಲಿ ನಾಯಿ ಸಾಕುವವರಿಗೆ ಕಟ್ಟು ನಿಟ್ಟಿನ ನಿಯಮ ಜಾರಿಗೆ ಮುಂದಾಗಿದ್ದಾರೆ. ರಾಜ್ಯದಲ್ಲಿನ ಪರಿಸ್ಥಿತಿ ಕುರಿತಾಗಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಿಎಂ, ನಾಯಿ ಸಾಕುವವರಿಗೆ ವಿಶೇಷ ಹಾಗೂ ಕಟ್ಟುನಿಟ್ಟಿನ ಸೂಚನೆ ನೀಡಿದ್ದು,
ಮನೆಯಲ್ಲಿ ಸಾಕಿದ ನಾಯಿಗಳನ್ನು ಬೀದಿಗೆ ಕರೆತಂದು ಕೊಳಕು ಮಾಡಬಾರದು. ಈ ಬಗ್ಗೆ ಸ್ಥಳೀಯ ಅಧಿಕಾರಿಗಳು ಹೆಚ್ಚಿನ ಗಮನಹರಿಸಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಮಹಾನಗರ ಪಾಲಿಕೆ ಹಾಗೂ ಇತರೆ ಜವಾಬ್ದಾರಿಯುತ ಇಲಾಖೆಗಳು ನಾಯಿ ಸಾಕುವವರ ಮೇಲೆ ಗಮನವಿಡಿ. ಅಲ್ಲದೆ ಸಮಯಕ್ಕೆ ಸರಿಯಾಗಿ ನಾಯಿಗಳಿಗೆ ಲಸಿಕೆ ಹಾಕುವುದನ್ನು ಸಹ ಖಚಿತಪಡಿಸಿಕೊಳ್ಳಿ ಎಂದು ಸೂಚಿಸಿದ್ದಾರೆ.
ಸಾರ್ವಜನಿಕರು ಓಡಾಡುವ ರಸ್ತೆ ಸೇರಿದಂತೆ ತಮ್ಮ ಆಸುಪಾಸು ಯಾರಾದರೂ ತಮ್ಮ ನಾಯಿಯನ್ನು ಶೌಚ ಮಾಡಿಸುವ ಉದ್ದೇಶದಿಂದ ಮನೆಯಿಂದ ಹೊರತಂದು ತಿರುಗಾಡಿಸುವುದು ಕಂಡುಬಂದರೆ ತಕ್ಷಣವೇ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಕಠಿಣ ನಿಯಮ ಜಾರಿಗೊಳಿಸಲು ಮುಂದಾಗಿದೆ.
ಸಾಕು ಪ್ರಾಣಿಯನ್ನು ಹೊರಗೆ ಕರೆದುಕೊಂಡು ಹೋಗುವಾಗ ಸ್ವಚ್ಛತೆ ಜೊತೆಗೆ ರಸ್ತೆಯಲ್ಲಿ ಕಸ ಹಾಕುವವರಿಗೂ ಕೂಡ ಖಡಕ್ ವಾರ್ನಿಂಗ್ ನೀಡಲಾಗಿದೆ.