Publish Date: Wed, 29 Dec 2021 (10:39 IST)
Updated Date: Wed, 29 Dec 2021 (10:41 IST)
ಬೆಂಗಳೂರು : ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿಯಾದ ಹಿನ್ನೆಲೆಯಲ್ಲಿ ಹೊಸ ವರ್ಷದ ಪಾರ್ಟಿಗಾಗಿ ರಾಜ್ಯದ ಜನರು ನೆರೆಯ ರಾಜ್ಯಗಳಿಗೆ ವಲಸೆ ಹೋಗಲು ಸಜ್ಜಾಗಿದ್ದಾರೆ.
ಇದರಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟ ಉಂಟಾಗಲಿದೆ. ಮಂಗಳವಾರ ರಾತ್ರಿಯಿಂದಲೇ 10 ದಿನಗಳ ಕಾಲ ರಾಜ್ಯದಲ್ಲಿ ರಾತ್ರಿ 10 ರಿಂದ ಬೆಳಿಗ್ಗೆ 5 ಗಂಟೆವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಹೊಸ ವರ್ಷಕ್ಕೆ ಹೋಟೆಲ್, ರೆಸಾರ್ಟ್, ರೆಸ್ಟೋರೆಂಟ್, ಬಾರ್, ಪಬ್ನಲ್ಲಿ ಪಾರ್ಟಿ ಮಾಡುವವರು ನೆರೆಯ ಗೋವಾ, ತಮಿಳುನಾಡಿಗೆ ವಲಸೆ ಹೋಗುತ್ತಿದ್ದಾರೆ.
ಈಗಾಗಲೇ ಪಾರ್ಟಿಗಾಗಿ ನಗರ ಹಾಗೂ ಆಸುಪಾಸಿನ ಪ್ರದೇಶದ ರೆಸಾರ್ಟ್, ಹೋಟೆಲ್ ಬುಕ್ ಮಾಡಿದ ಗ್ರಾಹಕರು ಆರ್ಡರ್ ಕ್ಯಾನ್ಸಲ್ ಮಾಡುತ್ತಿದ್ದಾರೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎನ್ನುತ್ತಾರೆ ಮಾಲೀಕರು.
ಕೋವಿಡ್ ಪೂರ್ವದಲ್ಲಿ ಹೊಸ ವರ್ಷದ ಮುನ್ನಾದಿನ ಎಂಜಿ ರೋಡ್, ಬ್ರಿಗೇಡ್ ರೋಡ್ನಲ್ಲಿ ಜನ ಜಾತ್ರೆಯೇ ಸೇರುತ್ತಿತ್ತು. ಪಬ್, ಬಾರ್, ಹೋಟೆಲ್ಗಳು ಕಿಕ್ಕಿರಿದು ತುಂಬಿರುತ್ತಿದ್ದವು.
ಬೆಳಗಾಗುವುದರೊಳಗೆ ನೂರಾರು ಕೋಟಿ ರೂ. ವಹಿವಾಟು ನಡೆಯುತ್ತಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಕೋವಿಡ್ ಬಿಗಿ ನಿಯಮದ ಹಿನ್ನೆಲೆಯಲ್ಲಿ ಜನರೇ ಬರುತ್ತಿಲ್ಲ. ಮೋಜು ಮಸ್ತಿಗೆ ಬ್ರೇಕ್ ಬಿದ್ದಿದ್ದು, ವ್ಯಾಪಾರ ವಹಿವಾಟು ಪಾತಾಳಕ್ಕೆ ಕುಸಿದಿದೆ.