Publish Date: Tue, 28 Dec 2021 (14:08 IST)
Updated Date: Tue, 28 Dec 2021 (20:11 IST)
ಬೆಂಗಳೂರು : ಕೋವಿಡ್ ನಿಯಂತ್ರಣಕ್ಕಾಗಿ ಮಂಗಳವಾರ ರಾತ್ರಿಯಿಂದ ಜಾರಿಗೆ ಬರುವಂತೆ ಕರ್ನಾಟಕ ರಾಜ್ಯದಲ್ಲಿ ನೈಟ್ ಕರ್ಫ್ಯೂ ಸೇರಿದಂತೆ ಹಲವು ನಿರ್ಬಂಧಗಳನ್ನು ಹೇರಲಾಗಿದೆ.
ಇದು ಹೋಟೆಲ್, ವ್ಯಾಪಾರ, ಸಾರಿಗೆ ಸೇರಿದಂತೆ ಹಲವು ವಲಯಗಳ ಮೇಲೆ ಭಾರಿ ಹೊಡೆತ ನೀಡಲಿದ್ದು, ಹೀಗಾಗಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಜತೆಗೆ ನಿರ್ಬಂಧಗಳ ಸಡಿಲಿಕೆಗೆ ಒತ್ತಡ ಹೆಚ್ಚಾಗಿದೆ.
ಎರಡು ಬಾರಿಯ ಲಾಕ್ಡೌನ್, ಹಲವು ಬಾರಿ ಎದುರಾದ ನೈಟ್ ಕರ್ಫ್ಯೂಗಳಿಂದ ಈಗಾಗಲೇ ಭಾರಿ ಸಂಕಷ್ಟದಲ್ಲಿರುವ ಆತಿಥ್ಯ, ಉದ್ಯಮ ಕ್ಷೇತ್ರಗಳು ಒಂದಿಷ್ಟು ಚೇತರಿಕೆ ಕಾಣುತ್ತಿವೆ. ಈ ಬಾರಿಯ ಹೊಸ ವರ್ಷಾಚರಣೆಯ ಮೇಲೆ ಭಾರಿ ನಿರೀಕ್ಷೆಯನ್ನು ಇಟ್ಟುಕೊಂಡಿದ್ದವು.
ರಾಜ್ಯ ಸರಕಾರ ಡಿಸೆಂಬರ್ 28ರಿಂದ ಜನವರಿ 7 ರವರೆಗೆ ರಾತ್ರಿ ಕರ್ಫ್ಯೂ ವಿಧಿಸಿದ್ದರೆ, ಡಿಸೆಂಬರ್ 30 ರಿಂದ ಜನವರಿ 4ರವರೆಗೆ ಹೋಟೆಲ್, ಪಬ್, ಬಾರ್ಗಳಲ್ಲಿ ಶೇ. 50ರಷ್ಟು ಸೀಟು ಭರ್ತಿಗೆ ಮಾತ್ರ ಅವಕಾಶ ನೀಡಿದೆ.
ಸಭೆ ಸಮಾರಂಭ, ರಾಜಕೀಯ ಸಮಾವೇಶ, ಸಿನಿಮಾ ಮಂದಿರ, ಸಾರ್ವಜನಿಕ ಸಾರಿಗೆಯಲ್ಲಿ ಯಾವುದೇ ನಿರ್ಬಂಧವಿಲ್ಲ. ಕೇವಲ ಕೆಲವೇ ಉದ್ಯಮಗಳನ್ನು ಮಾತ್ರ ಗುರಿಯಾಗಿಸಿಕೊಂಡು ನಿಷೇಧಾಜ್ಞೆ ಹೇರುವುದು ಎಷ್ಟು ಸರಿ ಎಂದು ಉದ್ಯಮಿಗಳು ಸರಕಾರವನ್ನು ಪ್ರಶ್ನಿಸಿದ್ದಾರೆ.