Publish Date: Sat, 21 Apr 2018 (15:55 IST)
Updated Date: Sat, 21 Apr 2018 (15:58 IST)
ಕಲಬುರಗಿ ಗ್ರಾಮೀಣ ಕ್ಷೇತ್ರಕ್ಕೆ ಟಿಕೆಟ್ ಸಿಗದೆ ವಂಚಿತರಾದ ಮಾಜಿ ಸಚಿವ ರೇವುನಾಯಕ ಬೆಳಮಗಿ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಿರುದ್ಧ ತೊಡೆ ತಟ್ಟಿದ್ದಾರೆ.
ಟಿಕೆಟ್ ತಪ್ಪಿದ ಹಿನ್ನಲೆ ಕಲಬುರಗಿಯ ಸಂತೋಷ ಕಾಲೋನಿ ತಮ್ಮ ನಿವಾಸದ ಮುಂದೆ ಬೆಂಬಲಿಗರ ಸಭೆಯನ್ನು ನಡೆಸಿರುವ ರೇವುನಾಯಕ, ಬೆಂಬಲಿಗರ ಆಸೆಯಂತೆ ಬಿಜೆಪಿ ಪಕ್ಷ ತೊರೆದು, ಯಾವುದದರೂ ಪಕ್ಷ ಅಥವಾ ಪಕ್ಷೇತರವಾಗಿ ಸ್ಪರ್ಧಿಸುವದಾಗಿ ಸ್ಪಷ್ಟಪಡಿಸಿದರು.
ಇದೇ ವೇಳೆ ಏಕವಚನದಲ್ಲಿ ಬಿಎಸ್ ವೈ ವಿರುದ್ಧ ವಾಗ್ದಾಳಿ ನಡೆಸಿದ ಬೆಳಮಗಿ, ಬಂಜಾರ ಸಮುದಾಯದ ತಾಕತ್ತು ಎಷ್ಟು ಅನ್ನೋದನ್ನು ತೋರಿಸುತ್ತೇನೆ ಎಂದು ತೊಡೆ ತಟ್ಟಿದರು. ಸಮ್ರಿಶ ಸರ್ಕಾರದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡಲಿಲ್ಲ ಎಂಬ ಕಾರಣಕ್ಕೆ ರಾಜ್ಯದಾದ್ಯಂತ ಸಂಕಲ್ಪಯಾತ್ರೆ ಮಾಡಿದ್ದೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೀಗ ಯಡಿಯೂರಪ್ಪ ತಮ್ಮ ಬೆನ್ನಿಗೆ ಚುರಿ ಹಾಕಿದ್ದು, ತಾವು ಸಹ ರಾಜ್ಯದಾದ್ಯಂತ ಸಂಕಲ್ಪಯಾತ್ರೆ ನಡೆಸಿ ಯಡಿಯೂರಪ್ಪ ವಿರುದ್ಧ ಪ್ರಚಾರ ಮಾಡುವದಾಗಿ ಗುಡುಗಿದರು. ಜೆಡಿಎಸ್ ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಹಿತಚಿಂತಕರು ಒತ್ತಡ ಹೇರುತ್ತಿದ್ದಾರೆ. ಸದ್ಯ ವೀರಶೈವ ಮತ್ತು ಲಿಂಗಾಯತ ಮುಖಂಡರು ಸಭೆ ನಡೆಸುತ್ತಿದ್ದು, ಸಭೆ ನಂತರ ಸೂಕ್ತ ನಿರ್ಧಾರ ಕೈಗೊಳ್ಳುವದಾಗಿ ರೇವುನಾಯಕ ಹೇಳಿದರು.