Publish Date: Wed, 23 Mar 2022 (14:22 IST)
Updated Date: Wed, 23 Mar 2022 (20:25 IST)
ಬೆಂಗಳೂರು : ಸ್ಯಾಂಡಲ್ವುಡ್ ಪವರ್ ಸ್ಟಾರ್ ದಿ. ಡಾ. ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೇ,
ದಿ ಕಾಶ್ಮೀರ್ ಫೈಲ್ಸ್ ಸಿನಿಮಾಗಾಗಿ ಜೇಮ್ಸ್ ಎತ್ತಂಗಡಿಗೆ ಕುತಂತ್ರ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಆದರೆ ಅನಾವಶ್ಯಕವಾಗಿ ಜೇಮ್ಸ್ ಸಿನಿಮಾವನ್ನು ಥಿಯೇಟರ್ ನಿಂದ ತೆಗೆಯುವಂತಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಲನಚಿತ್ರ ವಾಣಿಜ್ಯ ಮಂಡಳಿ ಜೊತೆ ಮಾತಾಡಿದ್ದೀನಿ. ಶಿವರಾಜ್ ಕುಮಾರ್ ಜೊತೆಯೂ ಮಾತಾಡಿದ್ದೀನಿ, ನನ್ನ ಗಮನಕ್ಕೆ ತನ್ನಿ ಎಂದಿದ್ದೇನೆ.
ಏನೇ ಸಮಸ್ಯೆ ಇದ್ದರೂ ಗಮನಕ್ಕೆ ತಂದು ಕೂಡಲೇ ಸರಿಪಡಿಸಿ ಅಂತಾ ಸೂಚಿಸಿರುವುದಾಗಿ ತಿಳಿಸಿದರು.
ಅನಾವಶ್ಯಕವಾಗಿ ಥಿಯೇಟರ್ ನಿಂದ ಜೇಮ್ಸ್ ಸಿನಿಮಾ ತೆಗೆಯುವಂತಿಲ್ಲ. ಸಂಬಂಧಪಟ್ಟ ವಿತರಕರು, ನಿರ್ಮಾಪಕರಿಗೆ ಅಧಿಕಾರ ಇದೆ, ನೀವೇ ಇದನ್ನ ಸರಿಪಡಿಸಬೇಕು ಅಂತಾ ಹೇಳಿದ್ದೇನೆ.