Publish Date: Sat, 30 Apr 2022 (10:35 IST)
Updated Date: Sat, 30 Apr 2022 (10:28 IST)
ನವದೆಹಲಿ : ಭಾರತೀಯ ಹವಾಮಾನ ಇಲಾಖೆ 7 ರಾಜ್ಯಗಳಿಗೆ ಉಷ್ಣ ಮಾರುತದ ಎಚ್ಚರಿಕೆ ನೀಡಿದ ಬೆನ್ನಲ್ಲೇ, ಉತ್ತರದ ಹಲವು ರಾಜ್ಯಗಳಲ್ಲಿ ಶುಕ್ರವಾರ ಉಷ್ಣಾಂಶ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದ್ದು,
ಸಾಮಾನ್ಯ ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರಿದೆ. ದೆಹಲಿ, ಉತ್ತರಪ್ರದೇಶ, ರಾಜಸ್ಥಾನ, ಪಂಜಾಬ್, ಹರ್ಯಾಣ, ಗುಜರಾತ್ ಒಡಿಶಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಸರಾಸರಿ ಉಷ್ಣಾಂಶ 45 ಡಿ.ಸೆ ದಾಟಿದೆ.
ಉತ್ತರಪ್ರದೇಶದ ಬಂಡಾದಲ್ಲಿ ಗರಿಷ್ಠ 47.4 ಡಿ.ಸೆ, ಪ್ರಯಾಗ್ರಾಜ್ನಲ್ಲಿ 47 ಡಿ.ಸೆ. ಉಷ್ಣಾಂಶ ದಾಖಲಾಗಿದೆ. ಪ್ರಯಾಗ್ರಾಜ್ನ ಉಷ್ಣಾಂಶದ ಪ್ರಮಾಣವು ಏಪ್ರಿಲ್ ತಿಂಗಳಲ್ಲಿ ಕಳೆದ 20 ವರ್ಷಗಳಲ್ಲಿ ದಾಖಲಾದ ಗರಿಷ್ಠ ಪ್ರಮಾಣವಾಗಿದೆ. ಉಳಿದಂತೆ ಅಲಹಾಬಾದ್ನಲ್ಲಿ 46.8 ಡಿ.ಸೆ., ದಾಖಲಾಗಿದೆ.
ಇನ್ನು ರಾಜಸ್ಥಾನದ ಧೋಲ್ಪುರದಲ್ಲಿ 46.5, ಶ್ರೀಗಂಗಾನಗರದಲ್ಲಿ 46.4,ಸಂಗಾರಿಯಾದಲ್ಲಿ 46 ಡಿ.ಸೆ ದಾಖಲಾಗಿದೆ. ಮೇ 1ರಂದು ಜೋಧಪುರ, ಬಿಕಾನೇರ್ ಜಿಲ್ಲೆಗಳಲ್ಲಿ ಉಷ್ಣಾಂಶ ಕ್ರಮವಾಗಿ 45, 47 ಡಿ.ಸೆ. ತಲುಪುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಚಂದ್ರಾಪುರ ಜಿಲ್ಲೆಯಲ್ಲಿ 46.4 ಡಿ.ಸೆ. ಉಷ್ಣಾಂಶ ಬಿಸಿಲಿನ ಹೊಡೆತ ತಾಳಲಾಗದೇ 68 ವರ್ಷದ ವೃದ್ಧರೊಬ್ಬರು ಸಾವನ್ನಪ್ಪಿದ್ದಾರೆ. ಇನ್ನು ರಾಜಧಾನಿ ದೆಹಲಿಯಲ್ಲಿ ಶುಕ್ರವಾರ 46 ಡಿ.ಸೆ. ತಾಪಮಾನ ದಾಖಲಾಗಿದೆ. ಇದು ಏಪ್ರಿಲ್ ತಿಂಗಳಿನಲ್ಲಿ 12 ವರ್ಷದ ಗರಿಷ್ಠ.
ಮುಂದಿನ 5 ದಿನಗಳಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ಬಿಸಿಯ ವಾತಾವರಣ ಹೆಚ್ಚಾಗಲಿದೆ. ವಾಯವ್ಯ ಭಾರತದಲ್ಲಿ ಮುಂದಿನ 3 ದಿನಗಳಲ್ಲಿ ಉಷ್ಣಾಂಶ 2 ಡಿಗ್ರಿ ಏರಿಕೆಯಾಗಲಿದೆ.
ತಾಪಮಾನ ಹೆಚ್ಚಾದ ಹಿನ್ನೆಲೆಯಲ್ಲಿ ಒಡಿಶಾದಲ್ಲಿ ಶಾಲೆಗಳಿಗೆ ಏ.30ರವರೆಗೆ ರಜೆ ಘೋಷಿಸಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಶಾಲಾ- ಕಾಲೇಜುಗಳಿಗೆ ಮೇ 2ರವರೆಗೆ ರಜೆ ಪ್ರಕಟಿಸಲಾಗಿದೆ.