Publish Date: Tue, 24 Apr 2018 (12:33 IST)
Updated Date: Tue, 24 Apr 2018 (12:35 IST)
ಕಲಬುರಗಿ ದಕ್ಷಿಣ ಮತಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನಾಗಿ ಬಸವರಾಜ ದಿಗ್ಗಾವಿ ಹೆಸರನ್ನು ಘೋಷಣೆ ಮಾಡಲಾಗಿದೆ. ಪಕ್ಷದ ಝಂಡಾ ಹಿಡಿದು ದಿಗ್ಗಾವಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ.
ಆದರೆ ಇದೇ ಕ್ಷೇತ್ರದಿಂದ ಬಿಎಸ್ ಪಿ ಕೂಡ ತನ್ನ ಅಭ್ಯರ್ಥಿಯನ್ನಾಗಿ ಸೂರ್ಯಕಾಂತ ನಿಂಬಾಳ್ಕರ್ ಅವರನ್ನು ಕಣಕ್ಕೆ ಇಳಿಸುತ್ತಿದೆ. ಜೆಡಿಎಸ್ ದಿಗ್ಗಾವಿಗೆ ಬಿ ಫಾರಂ ನೀಡಿದ ಬೆನ್ನಲ್ಲೇ ಬಿಎಸ್ ಪಿ ಕೂಡ ಸೂರ್ಯಕಾಂತ ನಿಂಬಾಳ್ಕರ್ ಗೆ ಬಿ. ಫಾರಂ ನೀಡಿದೆ.
ಹೀಗಾಗಿ ಬಿಎಸ್ ಪಿಯಿಂದ ಸ್ಪರ್ಧಿಸುವುದು ಪಕ್ಕಾ ಎಂದು ಸೂರ್ಯಕಾಂತ ನಿಂಬಾಳ್ಕರ್ ಹೇಳಿದ್ದಾರೆ. ಆ ಮೂಲಕ ಕಲಬುರಗಿಯಲ್ಲಿ ಜೆಡಿಎಸ್ ಹಾಗೂ ಬಿಎಸ್ ಪಿ ದೋಸ್ತಿ ನಡುವೆ ಬಿರುಕು ಬಿಟ್ಟಿದೆಯಾ? ಎನ್ನುವ ಅನುಮಾನ ಆಯಾ ಪಕ್ಷಗಳ ಕಾರ್ಯಕರ್ತರು ಹಾಗೂ ಸಾರ್ವಜನಿಕರನ್ನು ಕಾಡಲಾರಂಭಿಸಿದೆ.
ಕಲಬುರಗಿ ಗ್ರಾಮೀಣ, ಚಿತ್ತಾಪುರ ಕ್ಷೇತ್ರಗಳಲ್ಲಿ ಬಿಎಸ್ ಪಿಗೆ ಟಿಕೆಟ್ ಕೊಡಬೇಕು ಎಂಬ ಮಾತಾಗಿತ್ತು ಎನ್ನಲಾಗಿದೆ. ಆದರೆ ಕಲಬುರಗಿ ಗ್ರಾಮೀಣ ಕ್ಷೇತ್ರಕ್ಕೆ ಬಿಎಸ್ ಪಿ ಬದಲು ಜೆಡಿಎಸ್ ತನ್ನ ಅಭ್ಯರ್ಥಿಯನ್ನಾಗಿ ಮಾಜಿ ಸಚಿವ ರೇವುನಾಯಕ ಬೆಳಮಗಿ ಅವರನ್ನು ಘೋಷಣೆ ಮಾಡಿ ಬಿ. ಫಾರಂ ನೀಡಿದೆ.
ಬಿಜೆಪಿಯಿಂದ ಬಂದ ನಾಯಕಗೆ ಜೆಡಿಎಸ್ ಮಣೆ ಹಾಕಿದೆ. ಹೀಗಾಗಿ ಗ್ರಾಮೀಣ ಕ್ಷೇತ್ರದ ಟಿಕೆಟ್ ಬಿಎಸ್ ಪಿ ಗೆ ತಪ್ಪಿದೆ. ಗ್ರಾಮೀಣ ಕ್ಷೇತ್ರದ ಬದಲಾಗಿ ಕಲಬುರಗಿ ದಕ್ಷಿಣ ಕ್ಷೇತ್ರದಲ್ಲಿ ಬಿಎಸ್ ಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಂದಾಗಿದೆ ಎಂಬ ಸುದ್ದಿ ಹರಿದಾಡಲಾರಂಭಿಸಿದೆ. ಜೆಡಿಎಸ್ ಹಾಗೂ ಬಿಎಸ್ ಪಿ ನಡುವಿನ ಈ ತಿಕ್ಕಾಟ ಯಾವ ರೀತಿ ಅಂತ್ಯಕಾಣಲಿದೆ ಎನ್ನುವ ಕುತೂಹಲ ಮೂಡಿಸಿದೆ.