Publish Date: Thu, 19 May 2022 (08:30 IST)
Updated Date: Thu, 19 May 2022 (01:32 IST)
ಗುವಾಹಟಿ : ಅಸ್ಸಾಂನಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ರಣಮಳೆಗೆ ರಸ್ತೆ, ರೈಲು ಹಳಿ ಸೇರಿದಂತೆ ಹಲವು ಭಾಗಗಳಲ್ಲಿ ಗುಡ್ಡ ಕುಸಿತಗೊಂಡು 4 ಲಕ್ಷಕ್ಕೂ ಅಧಿಕ ಮಂದಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.
ಅಸ್ಸಾಂನಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ತೀವ್ರ ಪ್ರಮಾಣದ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿಯಾಗಿದೆ.
26 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೂರಿದ್ದು, ಜನ ನೀರಿನ ಮಧ್ಯೆ ಜೀವ ಭಯದಿಂದ ರಕ್ಷಣೆಗಾಗಿ ಅಂಗಲಾಚುತ್ತಿದ್ದಾರೆ. ಪ್ರವಾಹದಿಂದಾಗಿ ಹಾಫ್ಲಾಂಗ್ ನಿಲ್ದಾಣದಲ್ಲಿ ರೈಲು ಉರುಳಿ ಬಿದ್ದಿದ್ದು, ಈಗಾಗಲೇ ಹಲವು ಸೇತುವೆಗಳು, ರೈಲ್ವೇ ಹಳಿಗಳು, ರಸ್ತೆಗಳು ಪ್ರವಾಹಕ್ಕೆ ಕೊಚ್ಚಿ ಹೋಗಿದೆ.
ಮುಖ್ಯವಾಗಿ ಹೊಜಯ್, ಕಚಾರ್ ಜಿಲ್ಲೆಗಳಲ್ಲಿ ಜಲ ವಿಲಯ ಹೆಚ್ಚಿದೆ. ಬ್ರಹ್ಮಪುತ್ರ, ಬರಾಕ್, ಕೊಪಿಲಿ ಮತ್ತಿತರ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ತ್ರಿಪುರ, ಮಿಜೋರಾಂ, ಮಣಿಪುರಕ್ಕೆ ರೈಲು ಸೇವೆಯೇ ಸ್ಥಗಿತಗೊಂಡಿದೆ.
ದಿಮಾ ಹೊಸವೋ ಜಿಲ್ಲೆಯ ಲುಮ್ದಿಂಗ್-ಬದರ್ಪುರ್ ನಡುವೆ ಕಳೆದ ಎರಡು ದಿನಗಳಿಂದ ರೈಲಲ್ಲಿ ಸಿಲುಕಿದ್ದ 2,800 ಪ್ರಯಾಣಿಕರನ್ನು ವಾಯುಸೇನೆ ಸಹಕಾರದಿಂದ ಸುರಕ್ಷಿತ ಪ್ರಾಂತ್ಯಗಳಿಗೆ ಶಿಫ್ಟ್ ಮಾಡಲಾಗಿದೆ. ಈಗಾಗಲೇ 1,900ಕ್ಕೂ ಆಧಿಕ ಮನೆಗಳಿಗೆ ಹಾನಿಯಾಗಿದ್ದು, 39,558 ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಶಿಫ್ಟ್ ಮಾಡಿದೆ. ಪ್ರವಾಹ ಪೀಡಿತ ಜಾಗಗಳಲ್ಲಿ 89 ಅಧಿಕ ಸಂತ್ರಸ್ಥರ ಕೇಂದ್ರ ತೆರೆಯಲಾಗಿದೆ.