Publish Date: Tue, 12 Jul 2022 (07:01 IST)
Updated Date: Tue, 12 Jul 2022 (07:03 IST)
ಬೆಂಗಳೂರು : ರಾಜ್ಯದ ಬಹುತೇಕ ಕಡೆ ಮಳೆ ಅಬ್ಬರಿಸುತ್ತಿದೆ. ಅದರಲ್ಲೂ ಕಳೆದ 10 ದಿನಗಳಿಂದ ಕರಾವಳಿ ಭಾಗದಲ್ಲಿ ವರುಣ ಆರ್ಭಟಿಸುತ್ತಿರುವ ಕಾರಣ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಉಡುಪಿಯಲ್ಲಿ ಪಾಪನಾಶಿನಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಮಠದ ಕುದ್ರು, ವಿಭುದೇಶ ತೀರ್ಥ ನಗರಕ್ಕೆ ನೀರುನುಗ್ಗಿದೆ. ಮಳೆ ನೀರಲ್ಲಿ ನಾಯಿಗಳು ಪರದಾಡಿವೆ. ಜನ ದೋಣಿ ಅವಲಂಬಿಸಿದ್ದಾರೆ. ಬೆಳ್ಳಾಲ, ನಂದ್ರೊಳ್ಳಿ ಕ್ಷೇತ್ರಪಾಲದಲ್ಲಿ ಮನೆ, ಉಪ್ಪುಂದದಲ್ಲಿ ಶಾಲಾ ಮೇಲ್ಛಾವಣಿ ಕುಸಿದಿವೆ.
ದಕ್ಷಿಣ ಕನ್ನಡದ ಮೊಗೆರ್ ಕುದ್ರುನಲ್ಲಿ ನೆರೆ ಇಳಿದಿಲ್ಲ. ಬಟ್ಟಪಾಡಿ ಕಡಲ ತೀರದಲ್ಲಿ ಭಾರೀ ಗಾತ್ರದ ಅಲೆಗಳ ಹೊಡೆತಕ್ಕೆ ರಸ್ತೆ ಕೊಚ್ಚಿಹೋಗಿದೆ. ರಸ್ತೆ ಸಂಪರ್ಕವಿಲ್ಲದೇ 30 ಮನೆಗಳ ಮಂದಿ ಪರದಾಡುವಂತಾಗಿದೆ.
ಕಡಲ್ಕೊರೆತದಿಂದ ತತ್ತರಿಸಿರುವ ಕಾಪು ತಾಲೂಕಿನ ಮುಳೂರಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿದ್ದರು. ಸಚಿವರು ಬಂದಿರುವ ವಿಚಾರ ತಿಳಿದ ಜನ, ಪ್ರವಾಹದ ನೀರಿನಲ್ಲಿ ನಡೆದು ಬಂದಿದ್ದರು. ಇದಕ್ಕೆ ಸಚಿವೆಯೂ ಸ್ಪಂದಿಸಿದ್ದರು. ಬೈತಡ್ಕದ ಹೊಳೆಯಲ್ಲಿ ಮುಳುಗಿದ್ದ ಕಾರಿನಲ್ಲಿದ್ದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
15 ಸೆಂ.ಮೀ ಮಳೆ ಸುರಿದಿದೆ. ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಬೀಸುತ್ತಿರುವ ಕಾರಣ ರಾಜ್ಯದಲ್ಲಿ ಇನ್ನೂ 5 ದಿನ ಭಾರೀ ಮಳೆಯಾಗಲಿದೆ. ಕರಾವಳಿ ಭಾಗದಲ್ಲಿ 3 ದಿನ ಆರೆಂಜ್ ಅಲರ್ಟ್, ಉತ್ತರ ಒಳನಾಡಿನಲ್ಲಿ 4 ದಿನ ಯೆಲ್ಲೋ ಅಲರ್ಟ್ ಘೋಷಣೆಯಾಗಿದೆ. ದಕ್ಷಿಣ ಕನ್ನಡದಲ್ಲಿ ನಾಳೆಯಿಂದ ಶಾಲೆಗಳು ತೆರೆಯಲಿವೆ.