Publish Date: Thu, 05 Jul 2018 (11:54 IST)
Updated Date: Thu, 05 Jul 2018 (11:57 IST)
ಬೆಂಗಳೂರು: ಸಮ್ಮಿಶ್ರ ಸರ್ಕಾರದ ಚೊಚ್ಚಲ ಬಜೆಟ್ ನ್ನು ಸಿಎಂ ಕುಮಾರಸ್ವಾಮಿ ವಿಧಾನಸೌಧದಲ್ಲಿ ಮಂಡಿಸುತ್ತಿದ್ದು, ವಿದ್ಯುತ್, ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳದ ಶಾಕ್ ಸಿಕ್ಕಿದೆ.
ವಿದ್ಯುತ್ ದರ ಪ್ರತಿ ಯೂನಿಟ್ ಗೆ 20 ಪೈಸೆಯಷ್ಟು ಹೆಚ್ಚಳವಾಗಲಿದ್ದರೆ, ಪೆಟ್ರೋಲ್ ಪ್ರತಿ ಲೀಟರ್ ಗೆ 1.14 ರೂ., ಡೀಸೆಲ್ 1.12 ರೂ. ಹೆಚ್ಚಳವಾಗಿರುವುದು ಶ್ರೀ ಸಾಮಾನ್ಯನಿಗೆ ದುಬಾರಿಯಾಗಲಿದೆ. ಮದ್ಯದ ಮೇಲಿನ ಸೆಸ್ ಶೇ. 2 ರಷ್ಟು ಹೆಚ್ಚಳವಾಗಲಿದೆ.
ಇನ್ನು ವೈದ್ಯಕೀಯ ಶಿಕ್ಷಣ ಸಚಿವ ಡಿಕೆ ಶಿವಕುಮಾರ್ ಸ್ವಕ್ಷೇತ್ರ ಕನಕಪುರಕ್ಕೆ ಹೊಸ ವೈದ್ಯಕೀಯ ಕಾಲೇಜು, ಕುಮಾರಸ್ವಾಮಿ ಕ್ಷೇತ್ರ ರಾಮನಗರದ 40 ಕೋಟಿ ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲು ಉದ್ದೇಶಿಲಾಗಿದೆ. ಚಾಮರಾಜನಗರ, ಹಾಸನ, ಗದಗದಲ್ಲೂ ಹೊಸ ಆಸ್ಪತ್ರೆ ನಿರ್ಮಿಸಲಾಗುವುದು.
ಬಹುನಿರೀಕ್ಷಿತ ರೈತರ ಸಾಲಮನ್ನಾ ಯೋಜನೆಯನ್ನು ಸಿಎಂ ಪ್ರಕಟಿಸಿದ್ದು, 2 ಲಕ್ಷ ರೂ.ವರೆಗಿನ ರೈತರ ಸಾಲಮನ್ನಾ ಮಾಡುವುದಾಗಿ ಘೋಷಿಸಿದ್ದಾರೆ. ಇದಕ್ಕಾಗಿ ಸರ್ಕಾರ 34 ಸಾವಿರ ಕೋಟಿ ರೂ. ಹೊರೆ ಹೊರಬೇಕಾಗಿದೆ. ಅಷ್ಟೇ ಅಲ್ಲದೆ, ಹಿಂದಿನ ಸರ್ಕಾರ ಘೋಷಿಸಿದ್ದ ಸಾಲಮನ್ನಾ ಸಂಪೂರ್ಣ ಪಾವತಿ ಮಾಡಲಿದೆ.
ರಾಮನಗರದಲ್ಲಿ ಹೊಸ ಚಲನಚಿತ್ರ ವಿಶ್ವವಿದ್ಯಾಲಯ ಸ್ಥಾಪಿಸುವುದಾಗಿ ಸಿಎಂ ಘೋಷಿಸಿದ್ದಾರೆ. ಇನ್ನು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ 100 ಕೋಟಿ ರೂ. ಅನುದಾನ ನೀಡಲಾಗಿದೆ. ತೆಂಗು ಬೆಳೆಗಾರರಿಗೆ 190 ಕೋಟಿ ರೂ. ಅನುದಾನ ನೀಡಲಿದೆ. ಅಷ್ಟೇ ಅಲ್ಲದೆ 8 ಲಕ್ಷ ಉದ್ಯೋಗ ಸೃಷ್ಟಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.