Publish Date: Sat, 02 Oct 2021 (15:30 IST)
Updated Date: Sat, 02 Oct 2021 (15:32 IST)
ದುಬೈ : 'ಏರ್ ಇಂಡಿಯಾ' ಸಂಸ್ಥೆಯನ್ನು ಕುರಿತಂತೆ ಕೇಂದ್ರ ಸರ್ಕಾರ ಇನ್ನೂ ಯಾವುದೇ ತೀರ್ಮಾನವನ್ನು ಕೈಗೊಂಡಿಲ್ಲ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಶ್ ಗೋಯಲ್ ಶನಿವಾರ ಇಲ್ಲಿ ಹೇಳಿದರು.
ವ್ಯವಸ್ಥಿತವಾಗಿ ನಿಯಮಾನುಸಾರ ಬಿಡ್ನ ಅಂತಿಮ ವಿಜೇತರನ್ನು ಆಯ್ಕೆ ಮಾಡಲಾಗುವುದು ಎಂದು ಹೇಳಿದರು.
'ನಾನು ದುಬೈನಲ್ಲಿದ್ದೇನೆ. ಯಾವುದೇ ತೀರ್ಮಾನ ಕೈಗೊಂಡ ಮಾಹಿತಿ ನನ್ನಲ್ಲಿಲ್ಲ. ಬಿಡ್ ಆಹ್ವಾನಿಸಿರುವುದು ನಿಜ. ಅದನ್ನು ನಿಗದಿತ ವೇಳೆಗೆ ಅಧಿಕಾರಿಗಳು ಗಮನಿಸುತ್ತಾರೆ. ನಿಯಮದಂತೆಯೇ ಎಲ್ಲವೂ ನಡೆಯಲಿದೆ' ಎಂದು ತಿಳಿಸಿದರು.
ಸಾಲದ ಸುಳಿಗೆ ಸಿಲುಕಿರುವ 'ಏರ್ ಇಂಡಿಯಾ' ವೈಮಾನಿಕ ಸಂಸ್ಥೆಯ ಮಾಲೀಕತ್ವವನ್ನು ಪಡೆಯುವ ಬಿಡ್ನಲ್ಲಿ ಟಾಟಾ ಸಂಸ್ಥೆಯು ವಿಜಯಿಯಾಗಿದೆ ಎಂಬ ಮಾಧ್ಯಮ ವರದಿಗಳನ್ನು ಕುರಿತ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯಿಸಿದರು.
ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆಯ ಕಾರ್ಯದರ್ಶಿ ತುಹಿನ್ಕಾಂತ ಪಾಂಡೆ ಈ ಮಧ್ಯೆ ಟ್ವೀಟ್ ಮಾಡಿದ್ದು, ಏರ್ ಇಂಡಿಯಾ ಕುರಿತಂತೆ ಕೇಂದ್ರ ಸರ್ಕಾರ ಇನ್ನೂ ಯಾವುದೇ ಹಣಕಾಸು ಬಿಡ್ ಅನುಮೋದಿಸಿಲ್ಲ ಎಂದಿದ್ದಾರೆ.