Publish Date: Sat, 12 Apr 2025 (08:25 IST)
Updated Date: Sat, 12 Apr 2025 (08:29 IST)
ಚೆನ್ನೈ: ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆಗೆ ಮುನ್ನ ಬಿಜೆಪಿ ಸ್ಥಳೀಯ ಪಕ್ಷ ಎಐಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿದೆ. ಇದರ ಹಿಂದೆ ಬಿಜೆಪಿ ಹೈಕಮಾಂಡ್ ಭಾರೀ ಲೆಕ್ಕಾಚಾರ ಹೊಂದಿದೆ.
ಅಣ್ಣಾಮಲೈ ನಾಯಕತ್ವದಲ್ಲಿ ಸಿಗದ ಗೆಲುವು
ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅಧಿಕಾರ ಸ್ವೀಕರಿಸಿದಾಗ ಬಿಜೆಪಿಗೆ ಭಾರೀ ನಿರೀಕ್ಷೆಯಿತ್ತು. ಆದರೆ ಲೋಕಸಭೆ ಚುನಾವಣೆಯಲ್ಲಿ ಸ್ವತಃ ಅಣ್ಣಾಮಲೈ ಸೋತರು. ಇದರಿಂದಾಗಿ ಏಕಾಂಗಿಯಾಗಿ ಸ್ಪರ್ಧಿಸಿ ಗೆಲ್ಲುವುದು ಕಷ್ಟ ಎಂದು ಬಿಜೆಪಿ ಅರ್ಥ ಮಾಡಿಕೊಂಡಿದೆ.
ತಮಿಳುನಾಡಿನಲ್ಲಿ ಸ್ಥಳೀಯ ಪಕ್ಷದ ನೆರವು ಬೇಕೇ ಬೇಕು
ತಮಿಳುನಾಡು ರಾಜಕೀಯವೇ ಹಾಗೆ. ಹಿಂದಿನಿಂದಲೂ ಇಲ್ಲಿ ರಾಷ್ಟ್ರೀಯ ಪಕ್ಷಗಳಿಗಿಂತ ಸ್ಥಳೀಯ ಪಕ್ಷಗಳೇ ಮೇಲುಗೈ ಸಾಧಿಸುತ್ತಿವೆ. ಜಯಲಲಿತಾ ತೀರಿಕೊಂಡ ನಂತರ ಎಐಡಿಎಂಕೆ ಕೊಂಚ ಕಳೆಗುಂದಿದೆ. ಆದರೂ ರಾಷ್ಟ್ರೀಯ ಪಕ್ಷವಾದ ಬಿಜೆಪಿಗೆ ಇಲ್ಲಿ ಗೆಲ್ಲಬೇಕಾದರೆ ಸ್ಥಳೀಯ ಪಕ್ಷದ ನೆರವು ಬೇಕು ಎಂಬುದನ್ನು ಅರ್ಥ ಮಾಡಿಕೊಂಡಿದೆ. ಸದ್ಯಕ್ಕೆ ಡಿಎಂಕೆ ಇಲ್ಲಿ ಪ್ರಬಲ ಪಕ್ಷ. ಇದನ್ನು ಮಣಿಸಬೇಕಾದರೆ ಮತ್ತೊಂದು ಸ್ಥಳೀಯ ಪಕ್ಷದ ಬೆಂಬಲ ಬೇಕೇ ಬೇಕು ಎಂಬುದನ್ನು ಬಿಜೆಪಿ ಅರ್ಥ ಮಾಡಿಕೊಂಡಿದೆ.
ದಕ್ಷಿಣ ಭಾರತ ಕೈ ತಪ್ಪಿ ಹೋಗುವ ಭೀತಿ
ಬಿಜೆಪಿಗೆ ಇತ್ತೀಚೆಗೆ ದಕ್ಷಿಣ ಭಾರತದ ಮೇಲೆ ಹಿಡಿತ ತಪ್ಪುತ್ತಿದೆ. ಈಗಾಗಲೇ ಕೇರಳ, ಕರ್ನಾಟಕ, ತಮಿಳುನಾಡು, ತೆಲಂಗಾಣ ಇಂಡಿಯಾ ಒಕ್ಕೂಟದ ಕೈಯಲ್ಲಿದೆ. ಹೀಗಾಗಿ ತಮಿಳುನಾಡಿನ ಮೂಲಕ ಮತ್ತೆ ದಕ್ಷಿಣ ಭಾರತದಲ್ಲಿ ತನ್ನ ಆಧಿಪತ್ಯ ಸಾಧಿಸಲು ಅಧಿಕಾರ ಸಿಗಬೇಕಿದೆ. ಇದಕ್ಕೆ ಎಐಡಿಎಂಕೆ ಮೈತ್ರಿಗೆ ಮುಂದಾಗಿದೆ. ಇದರ ಜೊತೆಗೆ ಕ್ಷೇತ್ರ ವಿಂಗಡಣೆ ವಿಚಾರದಲ್ಲಿ ದಕ್ಷಿಣ ಭಾರತದ ದೊಡ್ಡ ರಾಜ್ಯವೊಂದರ ಬೆಂಬಲ ಸಿಕ್ಕರೆ ಆನೆಬಲ ಬಂದಂತೆ ಎಂಬುದು ಬಿಜೆಪಿ ಲೆಕ್ಕಾಚಾರವಿರಬಹುದು.