ಚೆನ್ನೈ: ತಮಿಳುನಾಡು ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಹಾಲಿ ಅಧ್ಯಕ್ಷ ಅಣ್ಣಾಮಲೈ ನಿರ್ಗಮಿಸುತ್ತಿದ್ದು ಸದ್ಯದಲ್ಲೇ ಹೊಸ ನಾಯಕನ ನೇಮಕವಾಗಲಿದೆ. ಅಣ್ಣಾಮಲೈಗೆ ಕೊಕ್ ಕೊಟ್ಟು ಬಿಜೆಪಿ ಹೈಕಮಾಂಡ್ ಮತ್ತೆ ತಪ್ಪು ಮಾಡಿತಾ ಎಂಬ ಚರ್ಚೆ ಶುರುವಾಗಿದೆ.
ತಮಿಳುನಾಡಿನಲ್ಲಿ ಬಿಜೆಪಿಗೆ ಗೆಲುವು ತಂದುಕೊಡಲು ಸಾಧ್ಯವಾಗದೇ ಇದ್ದರೂ ಅಣ್ಣಾಮಲೈನಂತಹ ಡೈನಾಮಿಕ್ ನಾಯಕರು ಡಿಎಂಕೆ ಮತ್ತು ಎಐಡಿಎಂಕೆಗೆ ಪ್ರಬಲ ಪ್ರತಿಸ್ಪರ್ಧೆ ಒಡ್ಡಲು ಯಶಸ್ವಿಯಾಗಿದ್ದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಅಣ್ಣಾಮಲೈ ಪಕ್ಕಾ ಸೈನಿಕನಂತೆ ಪಕ್ಷ ಸಂಘಟನೆ ಮಾಡಿದ್ದರು.
ಅವರ ಕಾರ್ಯಕ್ಷಮತೆ ಬಗ್ಗೆ ಕಾರ್ಯಕರ್ತರಲ್ಲಿ ಅಭಿಮಾನವಿತ್ತು. ಆದರೆ ಇದೀಗ ತಮಿಳುನಾಡಿನಲ್ಲಿ ಎಐಡಿಎಂಕೆ ಜೊತೆ ಮೈತ್ರಿಗೆ ಮುಂದಾಗಿರುವ ಬಿಜೆಪಿ ಅಣ್ಣಾಮಲೈರನ್ನು ಸೈಡ್ ಲೈನ್ ಮಾಡಲು ಹೊರಟಿದೆ ಎಂಬ ಅಪವಾದ ಬಿಜೆಪಿ ಬೆಂಬಲಿಗರಿಂದ ಕೇಳಿಬಂದಿದೆ.
ಇದೇ ಕಾರಣಕ್ಕೆ ಈಗ ಅಣ್ಣಾಮಲೈ ಅಧ್ಯಕ್ಷ ಸ್ಥಾನ ಅವಧಿ ಮುಗಿದ ಬಳಿಕ ಮತ್ತೆ ಸ್ಪರ್ಧಿಸುವ ಇರಾದೆ ಇಲ್ಲ ಎಂದಿದ್ದಾರೆ. ಹೀಗಾಗಿ ತಮಿಳುನಾಡು ಬಿಜೆಪಿಗೆ ಹೊಸ ಅಧ್ಯಕ್ಷನ ಆಗಮನವಾಗಲಿದೆ. ಆದರೆ ಬಿಜೆಪಿ ಹೈಕಮಾಂಡ್ ನಿರ್ಧಾರಕ್ಕೆ ಬೆಂಬಲಿಗರಂತೂ ಅಸಮಾಧಾನವಾಗಿರುವುದು ನಿಜ. ಭವಿಷ್ಯದಲ್ಲಿ ಬಿಜೆಪಿಯ ಅತಿ ದೊಡ್ಡ ನಾಯಕರಲ್ಲಿ ಅಣ್ಣಾಮಲೈ ಕೂಡಾ ಒಬ್ಬರಾಗಬಲ್ಲರು. ಪಕ್ಷ ಸಂಘಟನೆಯಲ್ಲಿ, ಜ್ಞಾನದ ವಿಚಾರದಲ್ಲಿ ಅಣ್ಣಾಮಲೈ ಎತ್ತಿದ ಕೈ. ಹೀಗಿರುವ ಒಬ್ಬರ ನಾಯಕನನ್ನು ಸೈಡ್ ಲೈನ್ ಮಾಡುತ್ತಿರುವುದು ಸರಿಯಲ್ಲ ಎಂಬ ಬೇಸರ ಪಕ್ಷದ ಕಾರ್ಯಕರ್ತರಲ್ಲಿ ಕಂಡುಬಂದಿದೆ.