Select Your Language

Notifications

webdunia
webdunia
webdunia
webdunia

ನರೇಂದ್ರ ದಾಭೋಲ್ಕರ್ ಯಾರು? ಅವರ ಹತ್ಯೆಯ ಕಾರಣಗಳೇನು ನೋಡಿ

Narendra Dabholkar

Krishnaveni K

ಪುಣೆ , ಶುಕ್ರವಾರ, 10 ಮೇ 2024 (14:29 IST)
ಪುಣೆ: 2013 ರಲ್ಲಿ ನಡೆದಿದ್ದ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆಯ ವಿಶೇಷ ನ್ಯಾಯಾಲಯ ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ಮೂವರನ್ನು ಪ್ರಕರಣದಿಂದ ಖುಲಾಸೆಗೊಳಿಸಿ ತೀರ್ಪು ನೀಡಿದೆ.

ಸಚಿನ್ ಅಂದುರೆ ಮತ್ತು ಶರದ್ ಕಲಾಸ್ಕರ್ ಎಂಬ ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಉಳಿದಂತೆ ವೀರೇಂದ್ರ ಸಿನ್ಹ್ ತಾವ್ಡೆ, ಸಂಜೀವ್ ಪುನಾಲೇಕರ್ ಮತ್ತು ವಿಕ್ರಮ್ ಭಾವೆ ಅವರನ್ನು ಪ್ರಕರಣದಲ್ಲಿ ಆರೋಪದಿಂದ ಖುಲಾಸೆಗೊಳಿಸಲಾಗಿದೆ.


ನರೇಂದ್ರ ದಾಭೋಲ್ಕರ್ ಹತ್ಯೆ ಕಾರಣ, ಹಿನ್ನಲೆ
1945 ರಲ್ಲಿ ಜನಿಸಿದ್ದ ನರೇಂದ್ರ ದಾಭೋಲ್ಕರ್ ಪ್ರಮುಖ ಗಾಂಧೀವಾದಿ ಮತ್ತು ಸಮಾಜವಾದಿಯಾಗಿದ್ದ ದೇವದತ್ ದಾಭೋಲ್ಕರ್ ಅವರ ಕಿರಿಯ ಸಹೋದರನಾಗಿದ್ದರು. ಅಣ್ಣನಂತೇ ನರೇಂದ್ರ ದಾಭೋಲ್ಕರ್ ಕೂಡಾ ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದವರು.

ಮೀರಜ್ ನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಪದವಿ ಪಡೆದಿದ್ದರು. ರಾಷ್ಟ್ರೀಯ ಸೇವಾದಳದ ಸಿದ್ಧಾಂತಗಳಿಗೆ ಮಾರು ಹೋಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಇದಕ್ಕಾಗಿ 12 ವರ್ಷದ ತಮ್ಮ ವೈದ್ಯಕೀಯ ವೃತ್ತಿ ಜೀವನವನ್ನೇ ತೊರೆದಿದ್ದರು. ಬಳಿಕ ಮೂಢನಂಬಿಕೆ ಪಿಡುಗು ತೊಲಗಿಸುವ ಹೋರಾಟಗಳಲ್ಲಿ ತೊಡಗಿಸಿಕೊಂಡರು.  ಸಮಾಜದಲ್ಲಿ ಎಲ್ಲಾ ವರ್ಗದ ಜನರೂ ಸಮಾನರಾಗಿ, ಗೌರವಯುತವಾಗಿ ಬದುಕಲು ಅವಕಾಶ ಸಿಗಬೇಕೆಂದು ಹೋರಾಡಿದ ಪ್ರಮುಖರಲ್ಲಿ ಒಬ್ಬರಾಗಿದ್ದರು.

1983 ರಿಂದಲೇ ದಾಭೋಲ್ಕರ್ ಗೆ ಜೀವ ಬೆದರಿಕೆಯಿತ್ತು. ಆದರೆ ಅದನ್ನು ಅವರು ಕಡೆಗಣಿಸುತ್ತಲೇ ಬಂದರು. ಆದರೆ 2013 ರಲ್ಲಿ ಪುಣೆಯ ಓಂಕಾರೇಶ್ವರ ದೇವಾಲಯ ಸಮೀಪ ಬೆಳಗಿನ ಹೊತ್ತು ವಾಕಿಂಗ್ ಮಾಡುತ್ತಿದ್ದಾಗ ಇಬ್ಬರು ಆಗಂತುಕರು ದಾಭೋಲ್ಕರ್ ರನ್ನು ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ತಲೆ ಮತ್ತು ಎದೆಗೆ ಗುಂಡು ತಾಕಿದ್ದರಿಂದ ಸ್ಥಳದಲ್ಲೇ ಅವರು ಸಾವನ್ನಪ್ಪಿದ್ದರು. ಸನಾತನ ಸಾಂಸ್ಥಾ ಎನ್ನುವ ಹಿಂದೂ ಸಂಘಟನೆ ಅವರ ಹತ್ಯೆಯ ಹೊಣೆ ಹೊತ್ತುಕೊಂಡಿತ್ತು.

ದಾಭೋಲ್ಕರ್ ಗೆ ದೇಹದಾನ ಮಾಡಬೇಕೆಂಬ ಆಸೆಯಿತ್ತು. ಆದರೆ ಅವರ ಕೊಲೆಯ ವೇಳೆ ಎದೆ ಮತ್ತು ತಲೆಗೆ ಗಾಯವಾದ ಕಾರಣ ವೈದ್ಯಕೀಯ ಪ್ರಯೋಗಗಳಿಗೆ ದೇಹ ಯೋಗ್ಯವಲ್ಲ ಎನ್ನುವ ಕಾರಣಕ್ಕೆ ಅಂತ್ಯ ಸಂಸ್ಕಾರ ಮಾಡಲಾಯಿತು. ಅವರ ಅಂತಿಮ ಸಂಸ್ಕಾರ ಯಾವುದೇ ಸಾಂಪ್ರದಾಯಿಕ ವಿಧಿ ವಿಧಾನಗಳಂತೆ ನಡೆಯಲಿಲ್ಲ. ಸಂಪ್ರದಾಯಗಳ ವಿರೋಧಿಯಾಗಿದ್ದರಿಂದ ಮಗಳೇ ಅವರ ಅಂತ್ಯ ಸಂಸ್ಕಾರ ಮಾಡಿದರು.

ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಬರೋಬ್ಬರಿ 11 ವರ್ಷಗಳ ನಂತರ ವಿಚಾರಣೆ ಪೂರ್ಣಗೊಂಡು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು ಪ್ರಕರಣ