Publish Date: Sat, 01 Aug 2026 (09:27 IST)
Updated Date: Sat, 01 Aug 2026 (09:46 IST)
ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ನಡೆದ ವೈಯಕ್ತಿಕ ನಿಂದನೆ ಮತ್ತು ವಾಗ್ದಾಳಿಗಳಿಗೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಧ್ಯರಾತ್ರಿ ಹಂಚಿಕೊಂಡಿರುವ ವಿಶೇಷ ಸೆಲ್ಫಿ ವೀಡಿಯೊ ಸಂದೇಶವೊಂದು ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಪ್ರತಿಭಟನೆಗಳ ವೇಳೆ ಯುವಜನತೆ ನಿಂದನೀಯ ಭಾಷೆ ಬಳಸಿದ್ದಕ್ಕೆ ಸಂಬಂಧಿಸಿದಂತೆ 'X' (ಟ್ವಿಟರ್) ಹಾಗೂ ಇನ್ಸ್ಟಾಗ್ರಾಮ್ನಲ್ಲಿ ಸ್ಪಂದಿಸಿರುವ ಪ್ರಧಾನಿಯವರು, ದೇಶದ ಯುವಜನತೆಯ ಬಗ್ಗೆ ತಮಗಿರುವ ಕಾಳಜಿ ಹಾಗೂ ಔದಾರ್ಯವನ್ನು ಈ ಸಂದೇಶದ ಮೂಲಕ ವ್ಯಕ್ತಪಡಿಸಿದ್ದಾರೆ.
ನಿಂದನೆಯಿಂದ ಯಾವುದಕ್ಕೂ ಪರಿಹಾರ ಸಿಗುವುದಿಲ್ಲ. ದಾರಿ ತಪ್ಪಿದವರಿಗೆ ನಾವು ಸರಿ ದಾರಿ ತೋರಿಸೋಣ. ನಾವೆಲ್ಲರೂ ಒಂದಾಗಿ ಶ್ರಮಿಸೋಣ. ನಮ್ಮ ಭಾರತಕ್ಕಾಗಿ ಒಟ್ಟಾಗಿ ಕೆಲಸ ಮಾಡೋಣ.
ಜಂತರ್ ಮಂತರ್ನಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಗಳ ವೇಳೆ ತಮ್ಮ ವಿರುದ್ಧ ಹಾಗೂ ತಮ್ಮ ದಿವಂಗತ ತಾಯಿಯವರ ವಿರುದ್ಧ ಬಳಸಲಾದ ಅಸಂಸದೀಯ ಮಾತುಗಳ ಕುರಿತು ಪ್ರಸ್ತಾಪಿಸಿದ ಪ್ರಧಾನಿ, ಸಮಾಜಕ್ಕೆ ಇದರಿಂದ ಕೋಪ ಹಾಗೂ ಆಘಾತವಾಗಿರುವುದು ಸಹಜ ಎಂದಿದ್ದಾರೆ. ಆದರೆ, ಯೌವನ ಎಂಬುದು ತಪ್ಪುಗಳನ್ನು ಮಾಡುವ ಮತ್ತು ಅದರಿಂದ ಕಲಿಯುವ ವಯಸ್ಸು. ಹೀಗಾಗಿ ಅಂತಹ ಯುವಕರನ್ನು ಕೋರ್ಟ್, ಕಚೇರಿ ಅಥವಾ ಸಾಮಾಜಿಕ ಕಿರುಕುಳಕ್ಕೆ ಒಳಪಡಿಸುವ ಬದಲು ಕ್ಷಮಿಸಿ, ಸರಿ ದಾರಿಗೆ ತರುವುದು ನಮ್ಮ ಜವಾಬ್ದಾರಿ ಎಂದು ಕರೆಯಿತ್ತಿದ್ದಾರೆ.
ತಮ್ಮ ಭಾವನಾತ್ಮಕ ಉದಾಹರಣೆಯನ್ನು ನೀಡಿದ ಪ್ರಧಾನಿ, "ಮಾತನಾಡುವಾಗ ಆಕಸ್ಮಿಕವಾಗಿ ಹಲ್ಲು ನಾಲಗೆಯನ್ನು ಕಡಿದರೆ ನಾವು ಹಲ್ಲನ್ನು ಕಳೆದುಕೊಳ್ಳುವುದಿಲ್ಲ. ಏಕೆಂದರೆ ಎರಡೂ ನಮ್ಮ ದೇಹದ ಭಾಗಗಳೇ. ಅದೇ ರೀತಿ ದಾರಿ ತಪ್ಪಿದ ಯುವಜನರೂ ಸಹ ನಮ್ಮ ದೇಶದ ಮಕ್ಕಳೇ" ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ವೀಡಿಯೊದಲ್ಲಿ ಯುವಜನರ ಭವಿಷ್ಯದ ಕುರಿತು ಮಾತನಾಡಿದ ಪ್ರಧಾನಿ, ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯಲು ಸರ್ಕಾರ ಬಿಗಿ ಕಾನೂನುಗಳನ್ನು ಜಾರಿಗೆ ತರುತ್ತಿದೆ ಮತ್ತು ವ್ಯವಸ್ಥೆಯನ್ನು ಪಾರದರ್ಶಕಗೊಳಿಸಲು ಶ್ರಮಿಸುತ್ತಿದೆ ಎಂದು ಭರವಸೆ ನೀಡಿದ್ದಾರೆ.
ಅತ್ಯಂತ ಸರಳವಾಗಿ, ಯಾವುದೇ ವೇದಿಕೆ ಅಥವಾ ಭಾಷಣದ ಹಂಗಿಲ್ಲದೆ ನೇರವಾಗಿ ತಮ್ಮ ಮೊಬೈಲ್ ಕ್ಯಾಮೆರಾ ಮುಂದೆ ನಿಂತು "ಗೆಳೆಯರೇ..." ಎಂದು ಸಂಬೋಧಿಸಿ ಮಾಡಿದ ಈ ಸೆಲ್ಫಿ ವೀಡಿಯೊ Gen-Z ಹಾಗೂ ಯುವಜನತೆಯ ಮನಸ್ಸನ್ನು ತಲುಪಿದೆ. ರಾಜಕೀಯ ನಿಂದನೆಗಳು ಮತ್ತು ಕಿತ್ತಾಟಗಳ ನಡುವೆ ಪ್ರಧಾನಿಯವರ ಈ ಸಕಾರಾತ್ಮಕ ಮತ್ತು ಮಾರ್ಗದರ್ಶಕ ನಿಲುವು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ