Publish Date: Sun, 12 Sep 2021 (07:29 IST)
Updated Date: Sat, 11 Sep 2021 (23:17 IST)
ಅಹ್ಮದಾಬಾದ್ : ಅಮೆರಿಕದಲ್ಲಿ ವಿಶ್ವ ವಾಣಿಜ್ಯ ಕೇಂದ್ರದ ಕಟ್ಟಡಗಳ ಮೇಲೆ 20 ವರ್ಷಗಳ ಹಿಂದೆ ನಡೆದಿದ್ದ ದಾಳಿ ಮಾನವತೆಯ ಮೇಲಿನ ಹಲ್ಲೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಮಾನೀಯತೆಯ ಮೌಲ್ಯಗಳಿಂದಲೇ ಅಂಥ ಘಟನೆ ತಡೆಯಲು ಸಾಧ್ಯವಿದೆ ಎಂದರು. ಅಹ್ಮದಾಬಾದ್ನಲ್ಲಿ ನಿರ್ಮಿಸಲಾಗಿರುವ ಸರ್ದಾರ್ ಭವನವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, “1893ರಲ್ಲಿ ಇದೇ ದಿನದಂದು (ಸೆ. 11), ಸ್ವಾಮಿ ವಿವೇಕಾನಂದರು, ಚಿಕಾಗೋದಲ್ಲಿ ಮಾಡಿದ ತಮ್ಮ ಭಾಷಣದಲ್ಲಿ ಮಾನವೀಯ ಮೌಲ್ಯಗಳ ಮಹತ್ವವನ್ನು ಜಗತ್ತಿಗೇ ಸಾರಿ ಹೇಳಿದ್ದರು. ಆದರೆ, ದುರದೃಷ್ಟವಶಾತ್ 20 ವರ್ಷಗಳ ಹಿಂದೆ, ಅದೇ ದಿನದಂದು ಅಮೆರಿಕದಲ್ಲಿ ಭಯಭೀಕರ ಉಗ್ರರ ದಾಳಿ ನಡೆಯಿತು.
ಇಂಥ ಉಗ್ರರ ದಾಳಿಗಳಿಂದ ನಾವು ಪಾಠ ಕಲಿಯುವುದು ಎಷ್ಟು ಮುಖ್ಯವೋ, ಜನರಲ್ಲಿ ಸ್ವಾಮಿ ವಿವೇಕಾನಂದರು ಪ್ರಚುರಪಡಿಸಿದ ಮಾನವೀಯ ಮೌಲ್ಯಗಳನ್ನು ಬಿತ್ತುವುದೂ ಅಷ್ಟೇ ಮುಖ್ಯವಾಗಿದೆ. ಇಂಥ ಮೌಲ್ಯಗಳ ಪ್ರಜ್ಞೆಯು ಜಾಗೃತವಾಗಿದ್ದರೆ ಭಯೋತ್ಪಾದನಾ ಕೃತ್ಯಗಳು ಮಾಯವಾಗುತ್ತವೆ ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಿದರು.
ಸರ್ದಾರ್ ಭವನ್ ಉದ್ಘಾಟನೆ
ಸರ್ದಾರ್ ಅಣೆಕಟ್ಟು ಯೋಜನೆಯ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿರುವ “ಸರ್ದಾರ್ ಭವನ್ ಕಟ್ಟಡದ ಉದ್ಘಾಟನೆ ನೆರವೇರಿಸಿದರು. ಇದೇ ವೇಳೆ, ಸರ್ದಾರ್ ಅಣೆಕಟ್ಟು ಯೋಜನೆಯಡಿ, ಕೈಗೊಳ್ಳಲಾಗುವ ಫೇಸ್-2ರ ಕಾಮಗಾರಿಗೆ ಪ್ರಧಾನಿ ಅಹ್ಮದಾಬಾದ್ನಲ್ಲಿ ಚಾಲನೆ ನೀಡಿದರು.