Publish Date: Sun, 05 Mar 2023 (10:51 IST)
Updated Date: Sun, 05 Mar 2023 (11:23 IST)
ನವದೆಹಲಿ : ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಕಸ್ಟಡಿಯನ್ನು ಮತ್ತೆರಡು ದಿನಕ್ಕೆ ಸಿಬಿಐ ವಿಶೇಷ ನ್ಯಾಯಲಯ ವಿಸ್ತರಿಸಿದೆ.
ಹೊಸ ಮದ್ಯ ನೀತಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿತರಾದ ಮನೀಶ್ ಸಿಸೋಡಿಯಾ ವಿಚಾರಣೆ ಇನ್ನೂ ಬಾಕಿ ಇದೆ ಎಂದು ಸಿಬಿಐ ಪರ ವಕೀಲರು ಮನವಿ ಮಾಡಿದ ಹಿನ್ನೆಲೆ ಕಸ್ಟಡಿ ವಿಸ್ತರಿಸಿ ನ್ಯಾಯಾಲಯ ಆದೇಶಿಸಿದೆ.
ಕಳೆದ ಭಾನುವಾರ ಬಂಧನಕ್ಕೊಳಗಾದ ಮನೀಶ್ ಸಿಸೋಡಿಯಾ ಕಸ್ಟಡಿ ಅಂತ್ಯವಾದ ಹಿನ್ನೆಲೆ ಅವರನ್ನು ಇಂದು ರೋಸ್ ಅವೆನ್ಯೂ ಕೋರ್ಟ್ ಕಾಂಪ್ಲೆಕ್ಸ್ನಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.
ಸಿಬಿಐ ಪರ ವಾದ ಮಂಡಿಸಿದ ವಕೀಲರು, ಸಿಸೋಡಿಯಾ ವಿಚಾರಣೆಗೆ ಸ್ಪಂದಿಸುತ್ತಿಲ್ಲ. ಸಾಕಷ್ಟು ದಾಖಲೆಗಳು ಕಾಣೆಯಾಗಿವೆ. ಹಲವು ಆರೋಪಿಗಳ ಮೇಲೆ ಅವರು ನಿಯಂತ್ರಣ ಹೊಂದಿದ್ದಾರೆ. ವಿಚಾರಣೆಗಾಗಿ ಮೂರು ದಿನಗಳ ಕಸ್ಟಡಿ ಅಗತ್ಯ ಇದೆ ಎಂದು ಮನವಿ ಮಾಡಿದರು.