ಇಂಧೋರ್: ರಾಜ ರಘುವಂಶಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೊಂದೇ ಶಾಕಿಂಗ್ ವಿಚಾರಗಳು ಬಯಲಾಗುತ್ತಿದೆ. ಸೋನಮ್ ಪ್ರಿಯಕರ, ಹಂತಕ ರಾಜ್ ಖುಶ್ವಾ ಮನೆ ಮಗನಂತೇ ನಾಟಕವಾಡಿ ರಘುವಂಶಿ ಅಂತಿಮ ಕ್ರಿಯೆ ವೇಳೆ ಬಂದು ಮನೆಯವರನ್ನು ತಬ್ಬಿ ಸಾಂತ್ವನಿಸಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ.
ರಘುವಂಶಿ ಪತ್ನಿ ಸೋನಮ್ ಜೊತೆ ರಾಜ್ ಖುಶ್ವಾಗೆ ಪ್ರೇಮ ಸಂಬಂಧವಿತ್ತು. ಇದೇ ಕಾರಣಕ್ಕೆ ರಘುವಂಶಿಯನ್ನು ಸೋನಮ್ ಮತ್ತು ರಾಜ್ ತಮ್ಮ ಸ್ನೇಹಿತರ ಸಹಾಯದೊಂದಿಗೆ ಮೇಘಾಲಯಕ್ಕೆ ಹನಿಮೂನ್ ನೆಪದಲ್ಲಿ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದರು.
ಜೂನ್ 2 ರಂದು ರಘುವಂಶಿ ಮೃತದೇಹವನ್ನು ಪೊಲೀಸರು ಪತ್ತೆ ಮಾಡಿದ್ದರು. ಇದಾದ ಬಳಿಕ ಅಂತಿಮ ಕ್ರಿಯೆ ವೇಳೆ ರಘುವಂಶಿ ಮನೆಗೆ ರಾಜ್ ಖುಶ್ವಾ ಬಂದಿದ್ದ. ಸೋನಮ್ ತಂದೆಯನ್ನು ತಬ್ಬಿ ಹಿಡಿದು ನಾನು ನಿಮ್ಮ ಮಗನಂತೆ, ಸಮಾಧಾನ ಮಾಡಿಕೊಳ್ಳಿ ಎಂದು ಸಾಂತ್ವನ ಹೇಳುವ ನಾಟಕವನ್ನೂ ಆಡಿದ್ದ.
ಸೋನಮ್ ಮನೆಯಿಂದ ಈತನ ಮನೆ ಕೇವಲ ಒಂದೂವರೆ ಕಿ.ಮೀ. ದೂರದಲ್ಲಿತ್ತು. ಬಾಲ್ಯದಿಂದಲೂ ಆತ ಸೋನಮ್ ಮನೆಯವರಿಗೆ ಆಪ್ತನಾಗಿದ್ದನಂತೆ. ರಘುವಂಶಿ ಕೊಲೆ ಬಳಿಕವೂ ಸಾಂತ್ವನ ಹೇಳುವ ನೆಪದಲ್ಲಿ ಆತ ಮನೆಗೆ ಬಂದಿದ್ದ. ಆದರೆ ಆತನೇ ಈ ಕೃತ್ಯದಲ್ಲಿ ಭಾಗಿಯಾಗಿದ್ದಾನೆ ಎಂದು ನಮಗೆ ಗೊತ್ತೇ ಇರಲಿಲ್ಲ ಎಂದು ಸೋನಮ್ ತಂದೆ ಹೇಳಿಕೊಂಡಿದ್ದಾರೆ. ಮನೆ ಮಗನಂತಿದ್ದವನಿಗೇ ಬೆನ್ನಿಗೆ ಚೂರಿ ಹಾಕಿದ ಎಂದರೆ ಸೋನಮ್ ಕುಟುಂಬದವರಿಗೆ ನಂಬಲೂ ಸಾಧ್ಯವಾಗುತ್ತಿಲ್ಲ.