Publish Date: Thu, 11 Dec 2025 (10:31 IST)
Updated Date: Thu, 11 Dec 2025 (10:33 IST)
ನವದೆಹಲಿ: ದೇಶದಲ್ಲಿ ಎಲ್ಲಾ ಚುನಾವಣೆಗಳಲ್ಲಿ ಮತಗಳ್ಳತನವಾಗುತ್ತಿದೆ ಎಂದು ಆರೋಪಿಸುತ್ತಿರುವ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಚುನಾವಣಾ ಆಯೋಗಕ್ಕೂ ಅಂಕುಶಬೇಕು ಎಂದಿದ್ದಾರೆ. ಅವರ ಅಭಿಪ್ರಾಯವನ್ನು ಒಪ್ಪುತ್ತೀರಾ?
ಲೋಕಸಭೆಯಲ್ಲಿ ಎಸ್ಐಆರ್, ಮತಗಳ್ಳತನದ ಬಗ್ಗೆ ಮಾತನಾಡುವಾಗ ರಾಹುಲ್ ಗಾಂಧಿ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಚುನಾವಣಾ ಆಯೋಗಕ್ಕೆ ಮೋದಿ, ಅಮಿತ್ ಶಾ ಹೇಳಿದವರೇ ಆಯ್ಕೆಯಾಗುತ್ತಾರೆ. ಚುನಾವಣಾ ಆಯೋಗದ ಮನೋಭಾವಾ ಹೇಗಾಗಿದೆ ಎಂದರೆ ಅವರನ್ನು ಏನು ಮಾಡಿದರೂ ಯಾರೂ ಪ್ರಶ್ನಿಸುವಂತಿಲ್ಲ ಎನ್ನುವಂತಾಗಿದೆ.
ಆದರೆ ಇದು ಹೀಗೇ ಇರಲ್ಲ. ನಾವು ಅಧಿಕಾರಕ್ಕೆ ಬಂದಾಗ ಈ ನಿಯಮ ಬದಲಾವಣೆ ಮಾಡಲಿದ್ದೇವೆ ಎಂದಿದ್ದಾರೆ. ಈ ಮೂಲಕ ಚುನಾವಣಾ ಆಯೋಗ ಸ್ವಾಯತ್ತವಾಗಿರಲ್ಲ, ಸರ್ಕಾರದ ಅಂಕುಶವಿರಲಿದೆ ಎಂದು ಪರೋಕ್ಷವಾಗಿ ಸುಳಿವು ನೀಡಿದ್ದಾರೆ.
ಒಂದು ವೇಳೆ ಈ ರೀತಿ ಆದಲ್ಲಿ ಚುನಾವಣಾ ಆಯೋಗ ಈಗಿನಂತೆ ಸ್ವತಂತ್ರ ಸಂಸ್ಥೆಯಾಗಿರುವುದಿಲ್ಲ. ಅದೂ ಕೂಡಾ ಇತರೆ ಸಂಸ್ಥೆಗಳಂತೆ ಸರ್ಕಾರದ ಅಧೀನಕ್ಕೆ ಒಳಪಟ್ಟ ಸಂಸ್ಥೆಯಾಗಲಿದೆ. ಆಗ ಕೇಂದ್ರ ಸರ್ಕಾರದ ಕೈಯಲ್ಲೇ ಚುನಾವಣಾ ಆಯೋಗದ ಸೂತ್ರವಿರಲಿದೆ. ಇದರಿಂದ ಚುನಾವಣೆಗಳು ಪಾರದರ್ಶಕವಾಗಿರುತ್ತದೆ ಎಂದು ಹೇಳಲಾಗದು. ಆದರೆ ಚುನಾವಣಾ ಆಯೋಗದ ನಿರ್ಧಾರವನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನೆ, ತಿದ್ದುಪಡಿ ಮಾಡಬಹುದು. ಈಗಿನಂತೆ ಚುನಾವಣಾ ಆಯೋಗದ ನಿರ್ಧಾರವೇ ಅಂತಿಮವಾಗಿರುವುದಿಲ್ಲ. ಹೀಗಾಗಿ ರಾಹುಲ್ ಹೇಳಿದಂತೆ ಮಾಡಿದರೆ ಚುನಾವಣೆಗಳ ಮೇಲೆ ಈಗಿನಷ್ಟೂ ವಿಶ್ವಾಸಾರ್ಹತೆ ಉಳಿದುಕೊಳ್ಳುವುದು ಅನುಮಾನವಾಗಿದೆ.