Publish Date: Tue, 13 Aug 2019 (08:37 IST)
Updated Date: Tue, 13 Aug 2019 (08:42 IST)
ನವದೆಹಲಿ: ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದುಗೊಳಿಸಿ ಲಡಾಕ್ ನ್ನು ಕೇಂದ್ರಾಡಳಿತ ಪ್ರದೇಶವಾಗಿ ಮಾಡಿದ ಬಳಿಕ ಪಾಕಿಸ್ತಾನ ಪದೇ ಪದೇ ಭಾರತದೊಂದಿಗೆ ಯುದ್ಧೋತ್ಸಾಹದ ಮಾತನಾಡುತ್ತಿದೆ.
ಕೇವಲ ಮಾತಿನಲ್ಲಿ ಕೆಣಕುತ್ತಿರುವುದು ಮಾತ್ರವಲ್ಲ, ಭಾರತದೊಂದಿಗೆ ಯುದ್ಧ ನಡೆಸಲು ತಯಾರಿಯೂ ನಡೆಸುತ್ತಿದೆ ಎನ್ನಲಾಗಿದೆ. ಲಡಾಕ್ ಗಡಿಯಲ್ಲಿ ಪಾಕಿಸ್ತಾನ ತನ್ನ ಸೇನಾ ನೆಲೆಗೆ ಯುದ್ಧ ಸಾಮಗ್ರಿಗಳನ್ನು ಕೊಂಡೊಯ್ಯುತ್ತಿರುವುದು ಯುದ್ಧದ ಸಿದ್ಧತೆಯಾ ಎಂಬ ಅನುಮಾನಗಳು ಮೂಡಿಸಿವೆ.
ಯುದ್ಧ ಸಾಮಗ್ರಿಗಳನ್ನು ಸಾಗಣೆ ಮಾಡಿರುವುದಲ್ಲದೆ, ತನ್ನ ಎಫ್-17 ಯುದ್ಧ ವಿಮಾನಗಳನ್ನೂ ಗಡಿಯಲ್ಲಿ ತಂದಿಳಿಸಲು ಸಿದ್ಧತೆ ನಡೆಸಿದೆ. ಪಾಕಿಸ್ತಾನದ ಈ ಹೆಜ್ಜೆಯಯನ್ನು ಭಾರತ ಸೂಕ್ಷ್ಮವಾಗಿ ಅವಲೋಕಿಸುತ್ತಿದೆ. ಈ ನಡುವೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ವೈಮಾನಿಕ ಸಮೀಕ್ಷೆ ನಡೆಸಿ ಭದ್ರತಾ ಸ್ಥಿತಿಯನ್ನು ಅವಲೋಕಿಸಿದ್ದಾರೆ. ಈ ನಡುವೆ ಭಾರತ ಮತ್ತು ಪಾಕ್ ನಡುವೆ ಬಸ್, ರೈಲು ಸೇವೆ ರದ್ದಾಗಿದೆ. ಹೀಗಾಗಿ ಮತ್ತೆ ಉಭಯ ದೇಶಗಳ ನಡುವೆ ಯುದ್ಧದ ಕಾರ್ಮೋಡ ಕವಿದಿದೆ.