ಕೋಲ್ಕತ್ತಾ: ಬಿಜೆಪಿಯವರ ಹಿಂದೂ ಧರ್ಮ ಕೊಳಕು ಧರ್ಮ. ಅದನ್ನು ನಾವು ಪಾಲಿಸಲ್ಲ ಎಂದು ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೀಡಿರುವ ಹೇಳಿಕೆ ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ.
ರಂಜಾನ್ ಹಬ್ಬದ ಪ್ರಯುಕ್ತ ಸಾರ್ವಜನಿಕ ಪ್ರಾರ್ಥನೆ ಕಾರ್ಯಕ್ರಮದಲ್ಲಿ ಭಾಗಿಯಾದ ಮಮತಾ, ಹಿಂದೂ ಧರ್ಮದ ಬಗ್ಗೆ ನೀಡಿರುವ ಅವಹೇಳನಕಾರೀ ಹೇಳಿಕೆ ಈಗ ವಿವಾದಕ್ಕೆ ಗುರಿಯಾಗಿದೆ. ಬಿಜೆಪಿ ಸೋಷಿಯಲ್ ಮೀಡಿಯಾದಲ್ಲಿ ಮಮತಾ ವಿರುದ್ಧ ವಾಗ್ದಾಳಿ ನಡೆಸಿದೆ.
ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ ಟ್ವೀಟ್ ಮಾಡಿದ್ದು, ಸನಾತನ ಧರ್ಮವನ್ನು ಕೊಳಕು ಧರ್ಮ ಎನ್ನಲು ನಿಮಗೆ ಎಷ್ಟು ಧೈರ್ಯ? ನಿಮ್ಮದೇ ಸರ್ಕಾರದ ಅವಧಿಯಲ್ಲಿ ಹಿಂದೂಗಳ ವಿರುದ್ಧ ನಿಮ್ಮ ರಾಜ್ಯದಲ್ಲಿ ಸಾಕಷ್ಟು ದಾಳಿಗಳಾಗಿದ್ದರೂ ಕಣ್ಮುಚ್ಚಿ ಕುಳಿತುಕೊಂಡ ನೀವು ಈಗ ಹಿಂದೂ ಧರ್ಮವನ್ನೇ ಕೊಳಕು ಎನ್ನುತ್ತೀರಾ ಎಂದು ಕಿಡಿ ಕಾರಿದ್ದಾರೆ.
ಅಷ್ಟಕ್ಕೂ ಮಮತಾ ಹೇಳಿದ್ದೇನು?
ರಂಜಾನ್ ಕಾರ್ಯಕ್ರಮದಲ್ಲಿ ಮಮತಾ ಬಿಜೆಪಿ ಕೊಳಕು ಹಿಂದೂ ಧರ್ಮ ಪಾಲಿಸುತ್ತಿದೆ. ಅವರು ಧರ್ಮಗಳ ನಡುವೆ ವಿಷ ಬೀಜ ಬಿತ್ತುತ್ತಿದ್ದಾರೆ. ನಾನು ರಾಮಕೃಷ್ಣ ಪರಮಹಂಸ ಮತ್ತು ಸ್ವಾಮಿ ವಿವೇಕಾನಂದರ ಧರ್ಮ ಅನುಸರಿಸುತ್ತಿದ್ದೇನೆ. ಬಿಜೆಪಿಯವರ ಧರ್ಮ ನಿಜವಾದ ಹಿಂದುತ್ವದ ವಿರುದ್ಧವಾಗಿದೆ. ರಾಮ್ ಮತ್ತು ಬಾಮ್ (ಬಿಜೆಪಿ ಮತ್ತು ಎಡಪಕ್ಷಗಳು) ರಾಜ್ಯದಲ್ಲಿ ಕೋಮುಗಲಭೆ ಸೃಷ್ಟಿಸಲು ಪ್ರಚೋದನಕಾರೀ ಹೇಳಿಕೆಗಳನ್ನು ನೀಡುತ್ತಿವೆ. ಆದರೆ ನಾನು ಅದಕ್ಕೆ ಅವಕಾಶ ನೀಡುವುದಿಲ್ಲ. ಅಲ್ಪ ಸಂಖ್ಯಾತರ ರಕ್ಷಣೆಗೆ ಬದ್ಧ ಎಂದಿದ್ದಾರೆ.
ಅವರ ಈ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇಂದು ಮುಸ್ಲಿಮರ ಓಲೈಕೆಯ ಪರಮಾವಧಿ ಎಂದು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.