ಪ್ರಯಾಗ್ ರಾಜ್: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ನಾಗಸಾಧುಗಳು ಬಂದಿದ್ದಾರೆ. ಪ್ರತೀ ಬಾರಿ ಕುಂಭಮೇಳಕ್ಕೆ ಮೊಬೈಲ್, ವಾಚ್ ಇಲ್ಲದೇ ಇದ್ದರೂ ಟೈಂಗೆ ಸರಿಯಾಗಿ ಅವರು ಅಲ್ಲಿ ಬಂದು ಸೇರುವುದು ಹೇಗೆ ಎಂಬುದೇ ಎಲ್ಲರ ಕುತೂಹಲ.
ಕುಂಭಮೇಳ ಯಾವತ್ತೂ ನಡೆಯುವ ಪ್ರಕ್ರಿಯೆಯಲ್ಲ. ಇದು ಎಷ್ಟೋ ವರ್ಷಗಳಿಗೊಮ್ಮೆ ನಡೆಯುವಂತಹ ಧಾರ್ಮಿಕ ಹಬ್ಬ. ಈ ಉತ್ಸವ ಯಾವಾಗ ನಡೆಯುತ್ತದೆ, ಎಲ್ಲಿ ನಡೆಯುತ್ತದೆ ಎಂಬುದೆಲ್ಲಾ ನಮಗೆ ಮೊಬೈಲ್, ಟಿವಿ, ನ್ಯೂಸ್ ಮೂಲಕ ತಿಳಿಯುತ್ತದೆ. ಆ ದಿನ ಇಂದೇ ಎಂದು ಗೊತ್ತಾಗುತ್ತದೆ.
ಆದರೆ ನಾಗಸಾಧುಗಳು ವ್ಯಾವಹಾರಿಕ ಲೋಕದಿಂದಲೇ ದೂರವುಳಿದವರು. ಅವರು ನಮ್ಮ ನಿಮ್ಮಂತೆ ಮೊಬೈಲ್, ನ್ಯೂಸ್ ಯಾವುದೂ ನೋಡಲ್ಲ. ಹಾಗಿದ್ದರೂ ಸರಿಯಾಗಿ ಕುಂಭಮೇಳ ನಡೆಯುವ ಸಮಯಕ್ಕೇ ಎಲ್ಲೋ ಗುಹೆಗಳಲ್ಲಿರುವ ಅವರು ಬಂದು ಸೇರುತ್ತಾರೆ.
ಈ ಒಂದು ಕುಂಭಮೇಳಕ್ಕಾಗಿ ಎಲ್ಲೋ ಹಿಮಾಲಯದಲ್ಲಿ, ಗುಹೆಗಳಲ್ಲಿ ತಪಸ್ಸಿಗೆ ಕುಳಿತವರು ಪರ್ವತವಿಳಿದು ಸಾವಿರಾರು ಮೈಲಿ ಸಂಚಾರ ಮಾಡಿ ತಲುಪಬೇಕಾದ ಸ್ಥಳಕ್ಕೇ ಬಂದು ತಲುಪುತ್ತಾರೆ. ಇದು ನಿಜವಾದ ಪವಾಡವೆಂದೇ ಹೇಳಬೇಕು. ಇದಕ್ಕೇ ನಾಗಸಾಧುಗಳು ಎಂದರೆ ನಿಜವಾದ ಸನ್ಯಾಸಿಗಳು ಎಂದು ಎಲ್ಲರೂ ಗೌರವಿಸುವುದು.