Publish Date: Thu, 15 Jan 2026 (17:29 IST)
Updated Date: Thu, 15 Jan 2026 (17:34 IST)
ದಾವಣಗೆರೆ: ಬಿಜೆಪಿಗೆ ಮರಳುವಂತೆ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ ಎನ್ನುವ ಮೂಲಕ ಬಿಜೆಪಿಗೆ ಮರಳುವ ಕುರಿತು ಎಂದು ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಕೆ.ಎಸ್ ಈಶ್ವರಪ್ಪ ಅವರು ಮನಬಿಚ್ಚಿ ಮಾತನಾಡಿದ್ದಾರೆ.
ದಾವಣಗೆರೆಯ ಹರಿಹರದ ಪಂಚಮಸಾಲಿ ಪೀಠದಲ್ಲಿ ಪ್ರತಿಕ್ರಿಯಿಸಿದ ಅವರು, ಬಿಜೆಪಿಗೆ ಮರಳುವಂತೆ ಕಾರ್ಯಕರ್ತರಿಂದ ಒತ್ತಡ ಬರುತ್ತಿದ್ದು, ಪಕ್ಷದಲ್ಲಿ ಬದಲಾವಣೆ ಸಲುವಾಗಿ ನಾನು ಹೊರ ಬಂದಿರುವುದು. ಆ ಪರಿವರ್ತನೆ ಇವತ್ತಲ್ಲ ನಾಳೆ ಆಗುತ್ತೆ. ಬಿಜೆಪಿ ಕಾರ್ಯಕರ್ತರು ಪಕ್ಷದಲ್ಲಿ ಸಾಕಷ್ಟು ನೋವು ಅನುಭವಿಸುತ್ತಿದ್ದಾರೆ. ನನ್ನ ಮನಸ್ಸಲ್ಲೂ, ಯತ್ನಾಳ್ ಮನಸ್ಸಲ್ಲೂ ಇದೆ ವಿಚಾರ ಇದೆ ಎಂದು ಹೇಳಿದರು.
ನನ್ನ ಕುತ್ತಿಗೆ ಕೊಯ್ದರು ಹಿಂದುತ್ವ ಬಿಟ್ಟು ಬೇರೆ ಕಡೆ ಹೋಗಲ್ಲ, ಇವತ್ತಲ್ಲ ನಾಳೆ ಪಕ್ಷಕ್ಕೆ ಒಳ್ಳೆಯ ಸ್ಥಿತಿ ಬಂದೇ ಬರುತ್ತದೆ. ಬಿಜೆಪಿ ಪಾದಯಾತ್ರೆ ವಿಚಾರಕ್ಕೂ ನನಗೇನೂ ಸಂಬಂಧ ಇಲ್ಲ ಎಂದು ಪ್ರತಿಕ್ರಿಯಿಸಿದರು.
ಶಿಡ್ಲಘಟ್ಟದಲ್ಲಿ ಮಹಿಳಾ ಅಧಿಕಾರಿಗೆ ಕಾಂಗ್ರೆಸ್ ಮುಖಂಡ ಅವಾಜ್ ಹಾಕಿರುವ ವಿಚಾರವಾಗಿ, ಕಾಂಗ್ರೆಸ್ನವರಿಗೆ ಮೈ ಮೇಲೆ ಜ್ಞಾನ ಇಲ್ಲ. ಸರ್ಕಾರ ಅವರಿದ್ದು ಇದೆ ಎಂದು ಹೀಗೆ ಮಾಡುತ್ತಿದ್ದಾರೆ. ಅಧಿಕಾರದ ಮದ ಏರಿದಾಗ ಈ ರೀತಿ ಮಾಡ್ತಾರೆ. ರಾಜ್ಯದಲ್ಲಿ ಯಾವುದೇ ಮಹಿಳೆಯರಿಗೆ ಭದ್ರತೆ ಇಲ್ಲ. ಗೃಹ ಮಂತ್ರಿಗಳಿಗೆ ಹೇಳಿದ್ರೆ ಸಣ್ಣ ವಿಚಾರ ಬಿಡ್ರಿ ಅಂತಾರೆ. ಇಷ್ಟು ಹಗುರವಾಗಿ ತಗೆದುಕೊಳ್ಳುತ್ತಿದ್ದಾರೆ. ಅಧಿಕಾರ ಶಾಶ್ವತ ಎಂದುಕೊಂಡು ಈ ರೀತಿ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.