Publish Date: Tue, 07 Aug 2018 (21:51 IST)
Updated Date: Tue, 07 Aug 2018 (21:54 IST)
ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ (94) ಮಂಗಳವಾರ ನಿಧನರಾದರು.
ದೀರ್ಘಕಾಲದಿಂದ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರು ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ 15 ದಿನಗಳಿಂದ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ಕರುಣಾನಿಧಿ ಅವರು ಮೂವರು ಪತ್ನಿಯರು ಮತ್ತು ಎಂ.ಕೆ. ಸ್ಟಾಲಿನ್, ಅಳಗಿರಿ, ಕನ್ನಿಮೋಳಿ ಸೇರಿದಂತೆ ಆರು ಮಕ್ಕಳನ್ನು ಅಗಲಿದ್ದಾರೆ.
ವಯೋಸಹಜ ಅನಾರೋಗ್ಯದ ಕಾರಣದಿಂದ ಕರುಣಾನಿಧಿ ಅವರನ್ನು ಕೆಲ ದಿನಗಳ ಹಿಂದೆಯಷ್ಟೇ ನಗರದ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮತ್ತು ಕಳೆದ ಆದಿತ್ಯವಾರದಿಂದ ಅವರ ಆರೋಗ್ಯ ಹದಗೆಡುತ್ತಾ ಬಂದಿತ್ತು. ಇಂದು ಅವರ ಪ್ರಮುಖ ಅಂಗಗಳ ಕಾರ್ಯಕ್ಷಮತೆ ಕ್ಷೀಣವಾಗುತ್ತಾ ಬರುತ್ತಿದ್ದಂತೆಯೇ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ತಜ್ಞ ವೈದ್ಯರ ತಂಡವು ಕರುಣಾನಿಧಿ ಅವರ ಆರೋಗ್ಯ ಚೇತರಿಕೆಗೆ ಸಂಬಂಧಿಸಿದಂತೆ ಕಳವಳವನ್ನು ವ್ಯಕ್ತಪಡಿಸಿತ್ತು. ಮತ್ತು ಅವರ ಕುಟುಂಬ ಸದಸ್ಯರಿಗೆ ಈ ಕುರಿತಾದಂತೆ ಕ್ಷಣಕ್ಷಣದ ಮಾಹಿತಿಯನ್ನು ನೀಡಲಾಗುತ್ತಿತ್ತು.