ಇಂಧೋರ್: ಹನಿಮೂನ್ ಗೆಂದು ಕನಸು ಹೊತ್ತು ಹೊರಟಿದ್ದ ಗಂಡ. ಆದರೆ ಹೆಂಡತಿ ಹನಿಮೂನ್ ನಲ್ಲೇ ಗಂಡನಿಗೆ ಚಟ್ಟ ಕಟ್ಟಿದ್ದಳು. ಇಂಧೋರ್ ನಲ್ಲಿ ಹನಿಮೂನ್ ಗೆಂದು ಹೋಗಿದ್ದ ದಂಪತಿ ಕೊಲೆ ಪ್ರಕರಣಕ್ಕೆ ಈಗ ಟ್ವಿಸ್ಟ್ ಸಿಕ್ಕಿದೆ.
ರಾಜ ರಘುವಂಶಿ ಮತ್ತು ಸೋನಮ್ ಆಗ ತಾನೇ ಮದುವೆಯಾಗಿ ಹನಿಮೂನ್ ಗೆಂದು ಮೇಘಾಲಯಕ್ಕೆ ತೆರಳಿದ್ದರು. ಅಲ್ಲಿ ಪತಿ ರಾಜ ರಘುವಂಶಿ ಕೊಲೆಯಾಗಿದ್ದರು. ಪತ್ನಿ ನಾಪತ್ತೆಯಾಗಿದ್ದಳು. ಈ ಪ್ರಕರಣ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿತ್ತು.
ಇದೀಗ ಎರಡು ವಾರಗಳ ನಂತರ ಪತ್ನಿ ಸೋನಂ ಮೇಘಾಲಯ ಪೊಲೀಸರ ಮುಂದೆ ಶರಣಾಗತಿಯಾಗಿದ್ದು ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಪತಿಯನ್ನು ಕೊಲೆ ಮಾಡಲು ನಾಲ್ಕೈದು ಗೂಂಡಾಗಳನ್ನು ಗೊತ್ತು ಮಾಡಿದ್ದಾಗಿ ತಿಳಿಸಿದ್ದಾಳೆ.
ಇದೀಗ ಕೊಲೆಗೆ ಸಹಕರಿಸಿದ್ದ ಮೂವರು ಗೂಂಡಾಗಳನ್ನೂ ಬಂಧಿಸಲಾಗಿದೆ. ಶಂಕಿತರು ಪತ್ನಿಯೇ ತಮಗೆ ಸುಫಾರಿ ಕೊಟ್ಟಿದ್ದಾಗಿ ಹೇಳಿದ್ದರು. ಮೇ 23 ರಂದು ಹನಿಮೂನ್ ಗೆಂದು ತೆರಳಿದ್ದ ಪತ್ನಿ ನಾಪತ್ತೆಯಾಗಿದ್ದಳು. ಜೂನ್ 2 ರಂದು ಪತಿ ರಘುವಂಶಿ ಮೃತದೇಹ ಚಿರಾಪುಂಜಿಯ ಸೋಹರಿಮ್ ಕಣಿವೆಯಲ್ಲಿ ಪತ್ತೆಯಾಗಿತ್ತು. ಘಟನೆ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ರಘುವಂಶಿ ಮನೆಯವರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರು.
ಕೊನೆಯದಾಗಿ ದಂಪತಿ ನಂಗ್ರಿಯಾತ್ ನಿಂದ ಮೌಲಾಖಿಯಾತ್ ಕಡೆಗೆ 3000 ಮೆಟ್ಟಿಲುಗಳನ್ನು ಏರುತ್ತಿರುವುದನ್ನು ನೋಡಿದ್ದಾಗಿ ಪ್ರತ್ಯಕ್ಷರ್ಶಿ ಗೈಡ್ ಒಬ್ಬರು ಹೇಳಿದ್ದರು. ಅದರಂತೆ ತನಿಖೆ ನಡೆಸಿದ ಪೊಲೀಸರಿಗೆ ಗಂಡನ ಮೃತದೇಹ ಪತ್ತೆಯಾಗಿತ್ತು.ಅವರ ಜೊತೆಗೆ ಇನ್ನಿಬ್ಬರು ಇದ್ದಿದ್ದಾಗಿ ಆತ ಹೇಳಿದ್ದ. ಆದರೆ ಅವರು ಹಿಂದಿಯಲ್ಲಿ ಮಾತನಾಡುತ್ತಿದ್ದುದರಿಂದ ನನಗೆ ಅವರ ಮಾತು ಅರ್ಥವಾಗಲಿಲ್ಲ ಎಂದಿದ್ದ. ಆತನ ಮಾಹಿತಿ ಅನ್ವಯ ಪೊಲೀಸರು ತನಿಖೆ ನಡೆಸಿದ್ದರು. ಈಗ ಶಂಕಿತರಲ್ಲಿ ಓರ್ವನನ್ನು ಬಂಧಿಸಿದಾಗ ಪತ್ನಿಯ ಕೈವಾಡ ಬಯಲಾಗಿತ್ತು. ಇದೀಗ ಪತ್ನಿಯೇ ಪೊಲೀಸರ ಮುಂದೆ ಶರಣಾಗಿ ತನ್ನ ತಪ್ಪೊಪ್ಪಿಕೊಂಡಿದ್ದಾಳೆ.