Publish Date: Thu, 03 Feb 2022 (07:16 IST)
Updated Date: Thu, 03 Feb 2022 (09:20 IST)
ಕೊಲಂಬೊ : ಶ್ರೀಲಂಕಾದಲ್ಲಿ ತುರ್ತು ತೈಲ ಖರೀದಿಗೆ ಭಾರತ ಬುಧವಾರ 500 ಮಿಲಿಯನ್ ಡಾಲರ್(ಸುಮಾರು 3 ಸಾವಿರ ಕೋಟಿ ರೂ.) ಸಾಲ ನೀಡಿದೆ.
ಈ ಮೂಲಕ ಶ್ರೀಲಂಕಾಗೆ ತಾತ್ಕಾಲಿಕ ಆರ್ಥಿಕ ಪರಿಹಾರ ಲಭಿಸಿದೆ. ಶ್ರೀಲಂಕಾದಲ್ಲಿ ಸದ್ಯ ಆರ್ಥಿಕ ಕುಸಿತ ಕಂಡುಬಂದಿದ್ದು, ಇಂಧನದ ಕೊರತೆ ನಿಭಾಯಿಸಲು ಭಾರತ ಸಹಾಯ ಮಾಡುತ್ತಿದೆ.
ಶ್ರೀಲಂಕಾದಲ್ಲಿ ಬೃಹತ್ ಕಲ್ಲಿದ್ದಲು ವಿದ್ಯುತ್ ಸ್ಥಾವರಗಳಲ್ಲಿ ಸ್ಥಗಿತ ಹಾಗೂ ವಿದ್ಯುತ್ ಕಡಿತಗಳು ಹೆಚ್ಚಾಗಿವೆ. ಇದರಿಂದ ಅಲ್ಲಿನ ಜನರು ಅಡುಗೆ ಅನಿಲ ಹಾಗೂ ಸೀಮೆ ಎಣ್ಣೆ ಖರೀದಿಗೆ ಮುಂದಾಗುತ್ತಿದ್ದಾರೆ. ಹೀಗಾಗಿ ದೇಶ ತೈಲದ ಕೊರತೆ ಎದುರಿಸುತ್ತಿದೆ.
ಜನವರಿ 15ರಂದು ನಡೆದ ವರ್ಚುವಲ್ ಸಭೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹಾಗೂ ಶ್ರೀಲಾಂಕಾದ ಹಣಕಾಸು ಸಚಿವ ಬಸಿಲ್ ರಾಜಪಕ್ಸೆ ನಡುವೆ ಮಾತುಕತೆ ನಡೆದಿದ್ದು, ಈ ಸಂದರ್ಭದಲ್ಲಿ ಭಾರತ ಸಾಲ ನೀಡಲು ನಿರ್ಣಯಿಸಿದೆ ಎಂದು ಬುಧವಾರದ ಅಧಿಕೃತ ಮಾಹಿತಿಯಲ್ಲಿ ತಿಳಿದುಬಂದಿದೆ.