Publish Date: Mon, 25 Mar 2019 (06:52 IST)
Updated Date: Mon, 25 Mar 2019 (06:54 IST)
ನವದೆಹಲಿ : ಭಾರತದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಪ್ರತಿಯೊಬ್ಬರು ಚೌಕಿದಾರರೇ ಎಂದು ಪ್ರಧಾನಿ ಮೋದಿ ಹೇಳಿದ್ದರು. ಆದರೆ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ನಾನು ಚೌಕಿದಾರ್ ಅಲ್ಲ, ಬ್ರಾಹ್ಮಣ ಎಂದು ಹೇಳುವುದರ ಮೂಲಕ ಪ್ರಧಾನಿ ಮೋದಿಗೆ ಟಾಂಗ್ ನೀಡಿದ್ದಾರೆ.
ಪ್ರಧಾನಿ ಮೋದಿ ಅವರು ಮಾರ್ಚ್ 16ರಂದು `ನಾನೂ ಕೂಡ ಚೌಕಿದಾರ’ #MainBhiChowkidar ಎಂದು ಹೇಳಿ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿ ಜೊತೆಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿರುವ ಹೆಸರಿನ ಮುಂದೆ `ಚೌಕಿದಾರ’ ಎಂದು ಸೇರಿಸಿಕೊಂಡಿದ್ದರು. ಮೋದಿ ಹೆಸರು ಬದಲಾಯಿಸಿದ ಬೆನ್ನಲ್ಲೇ ಬಿಜೆಪಿ ನಾಯಕರು ಮತ್ತು ಮೋದಿ ಅಭಿಮಾನಿಗಳು ತಮ್ಮ ಹೆಸರಿನ ಮುಂದೆ ಚೌಕಿದಾರ ಎಂದು ಸೇರಿಸಿದ್ದಾರೆ.
ಆದರೆ ತಮಿಳು ವಾಹಿನಿಯೊಂದರ ಸಂದರ್ಶನದಲ್ಲಿ, ನಿಮ್ಮ ಟ್ವೀಟ್ ಖಾತೆಯ ಹೆಸರಿನ ಮುಂದೆ ಚೌಕಿದಾರ್ ಅಂತ ಯಾಕೆ ಸೇರಿಸಿಲ್ಲ ಎಂದು ವರದಿಗಾರರು ಸುಬ್ರಮಣಿಯನ್ ಸ್ವಾಮಿಯನ್ನು ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಚೌಕಿದಾರ್ ಆಗುವುದಿಲ್ಲ. ಯಾಕೆಂದರೆ ನಾನು ಬ್ರಾಹ್ಮಣ. ಹೀಗಾಗಿ ಬ್ರಾಹ್ಮಣರು ಚೌಕಿದಾರ್ ಆಗಲು ಸಾಧ್ಯವಿಲ್ಲ. ಇದು ಸತ್ಯ ಕೂಡ ಎಂದು ಹೇಳಿದ್ದಾರೆ.
ಚೌಕಿದಾರ್ ಏನು ಮಾಡಬೇಕು ಎನ್ನುವ ಆದೇಶವನ್ನು ನಾನು ನೀಡುತ್ತೇನೆ. ನಾವು ಹೇಳಿದಂತೆ ಚೌಕಿದಾರ್ ಕೇಳಬೇಕೆಂದು ಎಲ್ಲರೂ ಅಂದುಕೊಳ್ಳುತ್ತಾರೆ. ಹೀಗಾಗಿ ನಾನು ಚೌಕಿದಾರ್ ಆಗಲ್ಲ ಎಂದು ಸುಬ್ರಹ್ಮಣ್ಯಸ್ವಾಮಿ ತಿಳಿಸಿದ್ದಾರೆ. ಸಂಸದರ ಸಂದರ್ಶನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.