Select Your Language

Notifications

webdunia
webdunia
webdunia
webdunia

ಒಡವೆ ಖರೀದಿಸಿದ ಪತ್ನಿಯನ್ನು ಹೊಡೆದು ಕೊಂದ ಪತಿ!

ಒಡವೆ ಖರೀದಿಸಿದ ಪತ್ನಿಯನ್ನು ಹೊಡೆದು ಕೊಂದ ಪತಿ!
ಬೆಂಗಳೂರು , ಮಂಗಳವಾರ, 9 ನವೆಂಬರ್ 2021 (09:24 IST)
ಬೆಂಗಳೂರು : ಮನೆ ಬಾಡಿಗೆ ಕೊಡಲು ಇಟ್ಟಿದ್ದ ಹಣದಲ್ಲಿ ಆಭರಣ ಖರೀದಿಸಿದ ವಿಚಾರಕ್ಕೆ ದಂಪತಿ ನಡುವೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ದಯಾನಂದ ನಗರದ ಕೆ.ಎಂ. ಕಾಲೊನಿಯಲ್ಲಿ ವಾಸವಿದ್ದ ನಾಜಿಯಾ ಕೊಲೆಯಾದ ಮಹಿಳೆ. ಪತಿ ಆಟೋ ಚಾಲಕ ಫಾರೂಕ್ ಬಂಧಿತ. ಈ ಸಂಬಂಧ ಮೃತ ಮಹಿಳೆಯ ತಾಯಿ ನೀಡಿದ ದೂರಿನ ಮೇರೆಗೆ ಫಾರೂಕ್ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಫಾರೂಕ್ ಮತ್ತು ನಾಜಿಯಾ 18 ವರ್ಷಗಳ ಹಿಂದೆ ಮದುವೆಯಾಗಿದ್ದರು. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಎರಡು ವರ್ಷಗಳಿಂದ ದಂಪತಿ ಸಿದ್ಧಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕೆ.ಎಂ. ಕಾಲೊನಿಯ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು. ಜೀವನ ನಿರ್ವಹಣೆಗಾಗಿ ಫಾರೂಕ್ ಆಟೋ ಓಡಿಸುತ್ತಿದ್ದ. ಹಣದ ವಿಚಾರಕ್ಕೆ ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಜಗಳ ನಡೆದಾಗ ಒಮ್ಮೊಮ್ಮೆ ನಾಜಿಯಾ ತನ್ನ ಮಕ್ಕಳ ಜತೆ ತವರು ಮನೆಗೆ ಹೋಗುತ್ತಿದ್ದುದನ್ನು ಮಕ್ಕಳಿಂದ ಮಾಹಿತಿ ಪಡೆದುಕೊಳ್ಳಲಾಗಿದೆ ಎಂದು ಡಿಸಿಪಿ ಹರೀಶ್ ಪಾಂಡೆ ತಿಳಿಸಿದರು.
ಮನೆ ಬಾಡಿಗೆ ಕಟ್ಟಲೆಂದು ಫಾರೂಕ್ ಕಳೆದ ವಾರ 6500 ರೂ.ಗಳನ್ನು ಪತ್ನಿ ನಾಜಿಯಾಗೆ ನೀಡಿದ್ದ. ಈ ಹಣದಲ್ಲಿ ನಾಜಿಯಾ ತನ್ನ ಮಕ್ಕಳಿಗೆ ಕೃತಕ ಆಭರಣಗಳನ್ನು ಖರೀದಿಸಿದ್ದರು. ಬಳಿಕ ಹಣ ಕೊಡುವಂತೆ ಪತ್ನಿಯನ್ನು ಫಾರೂಕ್ ಕೇಳಿದ್ದಾನೆ. ಆದರೆ, ಹಣವಿಲ್ಲದಿದ್ದಾಗ ಇಬ್ಬರ ನಡುವೆ ಜಗಳವಾಗಿದೆ. ಕೋಪದಲ್ಲಿದ್ದ ಫಾರೂಕ್ ಪತ್ನಿಯ ಮುಖಕ್ಕೆ ಗುದ್ದಿ, ತಲೆಯನ್ನು ಗೊಡೆಗೆ ಗುದ್ದಿಸಿದ್ದಾನೆ. ತಲೆಗೆ ತೀವ್ರ ಪೆಟ್ಟು ಬಿದ್ದ ನಾಜಿಯಾ ಕುಸಿದು ಬಿದ್ದಾಗ ಪಕ್ಕದ ಬೀದಿಯಲ್ಲಿ ವಾಸವಿದ್ದ ನಾಜಿಯಾ ಪೋಷಕರಿಗೆ ಫಾರೂಕ್ ವಿಷಯ ತಿಳಿಸಿದ್ದಾನೆ. ಮನೆಗೆ ದೌಡಾಯಿಸಿದ ಆಕೆಯ ತಾಯಿ ಮತ್ತು ಸಹೋದರ ಹಾಗೂ ಫಾರೂಕ್ ಆಟೋದಲ್ಲಿ ನಾಜಿಯಾಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಎರಡು ಆಸ್ಪತ್ರೆಯಲ್ಲಿ ಆಕೆಯನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ. ಮೂರನೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡುವಷ್ಟರಲ್ಲಿ ಆಕೆ ಮೃತಪಟ್ಟಿದ್ದಾಳೆ .
ನಾಜಿಯಾ ಶವ ಸಂಸ್ಕಾರದ ಬಳಿಕ ಆಕೆಯ ತಾಯಿಯನ್ನು ವಿಚಾರಿಸಿದಾಗ ದಂಪತಿ ಜಗಳ ಮಾಡುತ್ತಿರುವ ವಿಷಯ ತಿಳಿಯಿತು. ಆಕೆಯ ತಾಯಿ ನೀಡಿದ ದೂರಿನ ಮೇರೆಗೆ ಫಾರೂಕ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೋಪದಲ್ಲಿ ಆಕೆಯ ಮೇಲೆ ಹಲ್ಲೆ ನಡೆಸಿದಾಗ ಮೃತಪಟ್ಟಿದ್ದಾಳೆ ಎಂಬುದನ್ನು ಒಪ್ಪಿಕೊಂಡಿದ್ದಾನೆ. ಆತನನ್ನು ಬಂಧಿಸಲಾಗಿದೆ. ಹಾಗೆಯೇ ನಾಜಿಯಾಳನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ ಎರಡು ಆಸ್ಪತ್ರೆಗಳಿಗೂ ಕಾರಣ ಕೇಳಿ ನೋಟಿಸ್ ನೀಡಲಾಗಿದೆ ಎಂದು ಡಿಸಿಪಿ ವಿವರಿಸಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಬೆಚ್ಚಿಬೀಳಿಸುವ ಪ್ರಕರಣಗಳು ದಾಖಲು!