Publish Date: Fri, 26 Jun 2020 (09:41 IST)
Updated Date: Fri, 26 Jun 2020 (09:43 IST)
ನವದೆಹಲಿ: ಭಾರತದ ವಿರುದ್ಧ ಚೀನಾ ಆಗಾಗ ಕಾಲು ಕೆರೆದು ಜಗಳ ತೆಗೆಯುವುದು ಇದೇ ಮೊದಲೇನಲ್ಲ. 1967 ರಲ್ಲಿ ಇಂತಹದ್ದೇ ಒಂದು ಘಟನೆ ನಡೆದಿತ್ತು. ಆಗ ಯುವ ಸಂಸದರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಚೀನಾಕ್ಕೆ ಕೊಟ್ಟ ತಿರುಗೇಟು ಹೇಗಿತ್ತು ಗೊತ್ತಾ?!
ಆಗಷ್ಟೇ ಚೀನಾ ಜತೆ ಯುದ್ಧವಾಗಿ ಭಾರತ ಸೋತು ಹೋಗಿ ಕೇವಲ ಮೂರು ವರ್ಷ ಕಳೆದಿತ್ತಷ್ಟೇ. ಸಹಜವಾಗಿಯೇ ಚೀನಾ ಮೇಲೆ ಭಾರತೀಯರಲ್ಲಿ ಆಕ್ರೋಶವಿತ್ತು. ಆಗ ಲಾಲ್ ಬಹದ್ದೂರ್ ಶಾಸ್ತ್ರಿ ಭಾರತದ ಪ್ರಧಾನಿಯಾಗಿದ್ದರು. ಈ ವೇಳೆ ಭಾರತದ ಮೇಲೆ ಮತ್ತೆ ಕಾಲು ಕೆರೆದು ನಿಂತಿದ್ದ ಚೀನಾ ಭಾರತೀಯ ಸೇನೆ ತನ್ನ 800 ಕುರಿಗಳನ್ನು ಅಕ್ರಮವಾಗಿ ವಶಕ್ಕೆ ಪಡೆದಿದೆ ಎಂದು ಆರೋಪಿಸಿತ್ತು.
ಇಷ್ಟಕ್ಕೇ ಸುಮ್ಮನಾಗದೇ ನೇರವಾಗಿ ಭಾರತ ಸರ್ಕಾರಕ್ಕೆ ಉತ್ತರಿಸುವಂತೆ ಪತ್ರವನ್ನೂ ಬರೆದಿತ್ತು. ಆದರೆ ಈ ವೇಳೆ ಅಂದು ಜನ ಸಂಘ ಪಕ್ಷದ ಸಂಸದರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ನವದೆಹಲಿಯಲ್ಲಿದ್ದ ಚೀನಾ ರಾಯಭಾರಿ ಕಚೇರಿಗೆ 800 ಕುರಿಗಳನ್ನು ತೆಗೆದುಕೊಂಡು ಹೋಗಿದ್ದಲ್ಲದೆ, ಅದರ ತಲೆ ಮೇಲೆ ‘ನಮ್ಮನ್ನು ಬೇಕಾದರೆ ತಿನ್ನಿ ಆದರೆ ವಿಶ್ವವನ್ನು ಕಾಪಾಡಿ’ ಎಂದು ಬಿತ್ತಿ ಪತ್ರವನ್ನೂ ಕಟ್ಟಿಬಿಟ್ಟಿದ್ದರಂತೆ.
ಚೀನಾ ಈ ವಿನೂತನ ಪ್ರತಿಭಟನೆಯಿಂದ ಅವಮಾನಕ್ಕೀಡಾಯಿತು. ತಕ್ಷಣವೇ ಒಳಗೊಳಗೇ ಉರಿದುಕೊಂಡ ಚೀನಾ ಭಾರತಕ್ಕೆ ಪತ್ರ ಬರೆದು ಇದು ತಮ್ಮ ದೇಶಕ್ಕೆ ಮಾಡಿದ ಅವಮಾನ ಎಂದು ದೂರಿತು. ಆದರೆ ಇದಕ್ಕೆ ಪ್ರತಿಕ್ರಿಯಿಸಿದ ಲಾಲ್ ಬಹುದ್ದೂರ್ ಶಾಸ್ತ್ರಿ ನೇತೃತ್ವದ ಸರ್ಕಾರ ‘ಇದು ನಮ್ಮ ದೇಶದ ಸಾಮಾನ್ಯ ನಾಗಕರಿಕರು ನಡೆಸಿದ ವಿನೂತನ ಪ್ರತಿಭಟನೆ. ಇದರಲ್ಲಿ ಸರ್ಕಾರದ ಪಾತ್ರವೇನೂ ಇಲ್ಲ’ ಎಂದಿತ್ತಂತೆ!