Publish Date: Sat, 06 Aug 2022 (10:15 IST)
Updated Date: Sat, 06 Aug 2022 (11:11 IST)
ನವದೆಹಲಿ : ಈ ಬಾರಿಯ 75ನೇ ಸ್ವಾತಂತ್ರ್ಯ ದಿನಾಚರಣೆಗೂ ಮುನ್ನವೇ ಲಷ್ಕರ್-ಎ-ತೈಬಾ, ಜೈಶ್-ಎ-ಮೊಹಮ್ಮದ್ ಹಾಗೂ ಇತರೇ ಉಗ್ರ ಸಂಘಟನೆಗಳಿಂದ ಭಯೋತ್ಪಾದನಾ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಕೇಂದ್ರೀಯ ಗುಪ್ತಚರ ಇಲಾಖೆ (ಐಬಿ) ಎಚ್ಚರಿಸಿದೆ.
ಲಷ್ಷರ್, ಜೆಇಎಂ ಮತ್ತು ಇತರೆ ಕೆಲವು ಭಯೋತ್ಪಾದನಾ ಸಂಘಟನೆಗಳಿಂದ ದಾಳಿಯ ಅಪಾಯವಿರುವ ಬಗ್ಗೆ ಐಬಿ 10 ಪುಟಗಳ ವರದಿ ನೀಡಿದ್ದು,
ರೋಹಿಂಗ್ಯಾ, ಅಫ್ಘಾನಿಸ್ತಾನ ಹಾಗೂ ಸುಡಾನ್ ದೇಶದ ಹೆಚ್ಚಿನ ಜನರು ವಾಸಿಸುವ ದೆಹಲಿಯಲ್ಲಿ ಹದ್ದಿನಕಣ್ಣು ಇಡುವಂತೆ ಹಾಗೂ ಟಿಫಿನ್ ಬಾಂಬ್, ಸ್ಟಿಕ್ಕಿ ಬಾಂಬ್ ಮತ್ತು ವಿವಿಐಡಿ ಬೆದರಿಕೆಯನ್ನು ಎದುರಿಸಲು ಜಾಗರೂಕರಾಗಿರುವಂತೆ ಹೇಳಿದೆ.
ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಕೆಂಪುಕೋಟೆಗೆ ಪ್ರವೇಶಿಸಲು ಕಠಿಣ ನಿಯಮಗಳನ್ನು ಜಾರಿಗೊಳಿಸುವಂತೆ ಅದು ದೆಹಲಿ ಪೊಲೀಸರಿಗೆ ಸೂಚಿಸಿದೆ. ಜಪಾನ್ ಪ್ರಧಾನಿ ಶಿಂಜೋ ಅಬೆ ಅವರ ಮೇಲಿನ ದಾಳಿ, ಉದಯಪುರ ಹತ್ಯೆ ಹಾಗೂ ಅಮರಾವತಿಗಳಲ್ಲಿ ನಡೆದ ಘಟನೆಗಳನ್ನೂ ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.