Publish Date: Tue, 26 Jul 2022 (15:42 IST)
Updated Date: Tue, 26 Jul 2022 (15:44 IST)
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಸುತ್ತೋಲೆ ಹೊರಡಿಸಿದ್ದು, ಈಗಾಗಲೇ ಸರ್ಕಾರಿ ನೌಕರರಿಗೆ ನಿಗದಿತ ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿದ್ದರು ಕೆಲವು ನೌಕರರು, ಅಧಿಕಾರಿಗಳಲ್ಲಿ ಸಮಯ ಪ್ರಜ್ಞೆ ಮತ್ತು ಕಾರ್ಯನಿಷ್ಠೆಯ ಕೊರತೆಯನ್ನು ಇತ್ತೀಚಿನ ದಿನಗಳಲ್ಲಿ ಅವಲೋಕಿಸಲಾಗಿದೆ ಎಂದಿದ್ದಾರೆ.
ಸಾರ್ವಜನಿಕರು ದೂರದ ಸ್ಥಳಗಳಿಂದ ಸರ್ಕಾರಿ ಕಚೇರಿಯಲ್ಲಿನ ತಮ್ಮ ಕಾರ್ಯಗಳಿಗೆ ಬೆಳಿಗ್ಗೆ ನಿಗದಿತ ಅವಧಿಗೆ ಸರ್ಕಾರದ ಕಚೇರಿಗಳಿಗೆ ಭೇಟಿ ನೀಡದಾಗ ಬಹುತೇಕ ಕಚೇರಿಗಳಲ್ಲಿ ಸಿಬ್ಬಂದಿಗಳು, ಅಧಿಕಾರಿಗಳು ಕಚೇರಿಗೆ ಹಾಜರಾಗಿಲ್ಲದೇ ಇರುವ ಕಾರಣ ಸಾಮಾನ್ಯ ಜನರು ಬವಣೆ ಪಡುವಂತೆ ಆಗಿದೆ ಎಂದು ಹೇಳಿದ್ದಾರೆ.
ಈ ಹಿನ್ನಲೆಯಲ್ಲಿ ಸರ್ಕಾರದ ಕಚೇರಿ ಪ್ರಾರಂಭದ ಸಮಯ ಬೆಳಿಗ್ಗೆ 10 ಗಂಟೆಗೆ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗುವುದು. ಅನ್ಯ ಕರ್ತವ್ಯದ ಮೇರೆಗೆ ತೆರಳಬೇಕಾಗಿದ್ದಲ್ಲಿ, ಚಲನ-ವಲನ ವಹಿಯಲ್ಲಿ ಸಕಾರಣವನ್ನು ನಮೂದಿಸಿ, ಮೇಲಾಧಿಕಾರಿಗಳ ಪೂರ್ವಾನುಮತಿಯನ್ನು ಪಡೆಯತಕ್ಕದ್ದು ಎಂದು ತಿಳಿಸಿದ್ದಾರೆ.
ನಿಗದಿತ ಕಾಲಾವಧಿಗಿಂತ ವಿಳಂಬವಾಗಿ ಹಾಜರಾಗುವ ಹಾಗೂ ಕಚೇರಿಯ ಅವಧಿಯಲ್ಲಿ ಸ್ವಸ್ಥಾನದಲ್ಲಿ ಇಲ್ಲದ, ಚಲನ-ವಲನ ವಹಿಯಲ್ಲಿ ನಮೂದಿಸಿ, ಮೇಲಾಧಿಕಾರಿಗಳ ಅನುಮತಿ ಪಡೆದಿಲ್ಲದ ನೌಕರರು, ಅಧಿಕಾರಿಗಳ ವಿರುದ್ಧ ಸಕ್ಷಮ ಪ್ರಾಧಿಕಾರವು ಸೂಕ್ತ ಶಿಸ್ತು ಕ್ರಮ ಜರುಗಿಸತಕ್ಕದ್ದು ಎಂದು ಸೂಚಿಸಿದ್ದಾರೆ.