Publish Date: Tue, 05 Jul 2022 (17:04 IST)
Updated Date: Tue, 05 Jul 2022 (16:04 IST)
ನನ್ನ ಮಗನಿಗೆ ಯಾರೂ ಸಾಲ ಕೊಡಬೇಡಿ. ದುಶ್ಚಟಕ್ಕೆ ಬಲಿಯಾಗಿ ತನ್ನ ಎಲ್ಲ ಆಸ್ತಿಯನ್ನೂ ಹಾಳು ಮಾಡಿಕೊಂಡಿದ್ದಾನೆ. ಅವನ ಬ್ಯಾಂಕ್ ಖಾತೆಯಲ್ಲಿ ಹಣ ಇಲ್ಲದಿದ್ದರೂ ಮುಂಗಡ ಚೆಕ್ ಕೊಟ್ಟು ಸಾಲ ತೆಗೆದುಕೊಳ್ಳುತ್ತಿದ್ದಾನೆ. ನನ್ನ ಹೆಸರನ್ನು ಹೇಳಿ ಸಾರ್ವಜನಿಕರಿಗೆ ಸುಳ್ಳು ಭರವಸೆ ಕೊಟ್ಟು ಸಾಲ ತೆಗೆದುಕೊಳ್ಳುತ್ತಿದ್ದಾನೆ.
ದಯವಿಟ್ಟು ಯಾರೂ ನನ್ನ ಮಗನಿಗೆ ಸಾಲ ಕೊಡಬೇಡಿ… ಎಂದು ಮಾಜಿ ಶಾಸಕರೊಬ್ಬರು ಸಾರ್ವಜನಿಕರಿಗೆ ಪ್ರಕಟಣೆ ಹೊರಡಿಸಿದ್ದಾರೆ.
ಹೌದು, ಮಗನ ನಡೆಯಿಂತ ಬೇಸತ್ತ ಮಾಜಿ ಶಾಸಕರೂ ಆದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ.ಎಸ್.ಪಾಟೀಲ್ ಈ ರೀತಿ ಪ್ರಕಟಣೆ ಹೊರಡಿಸಿದ್ದಾರೆ. ನನ್ನ ಸ್ವಂತ ಮಗನೇ ನನ್ನ ಹೆಸರನ್ನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾನೆ. ನನ್ನ ಪುತ್ರ ಬಾಪೂಗೌಡ ಪಾಟೀಲ್ಗೆ ಯಾರೂ ಸಾಲ ಕೊಡಬೇಡಿ ಎಂದು NWKSRTC ಲೆಟರ್ಹೆಡ್ ಮೂಲಕವೇ ಮನವಿ ಮಾಡಿದ್ದಾರೆ.
ಪದವೀಧರನಾದ ನನ್ನ ಮಗ, ಐದಾರು ವರ್ಷಗಳಿಂದ ದುಶ್ಚಟಕ್ಕೆ ಬಿದ್ದಿದ್ದಾನೆ. ಕೋಟಿಗಟ್ಟಲೇ ಸಾಲ ಮಾಡಿ, ಸಾಲ ತೀರಿಸಲು ಅವನ ಹೆಸರಿನಲ್ಲಿದ್ದ ಆಸ್ತಿಯನ್ನೂ ಮಾರಿದ್ದಾನೆ, ಅವನ ಮಾನಸಿಕ ಸ್ಥಿತಿ ಸರಿ ಇಲ್ಲ. ನನ್ನ ಹೆಸರನ್ನು ದುರುಪಯೋಗ ಮಾಡಿಕೊಂಡು ಜನರಿಗೆ ಸುಳ್ಳು ಹೇಳಿ ಸಾಲ ಪಡೆಯುತ್ತಿದ್ದಾನೆ. ದಯವಿಟ್ಟು ಸಾರ್ವಜನಿಕರು ನನ್ನ ಮಗನ ಮಾತಿಗೆ ಮರುಳಾಗಿ ಸಾಲ ಕೊಡಬಾರದು. ಮೋಸ ಹೋಗಬಾರದು ಎಂದು ವಿನಂತಿಸಿಕೊಂಡಿರುವ ಮಾಜಿ ಶಾಸಕರು ಮಾಧ್ಯಮಗಳಿಗೆ ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.