Publish Date: Tue, 05 Jul 2022 (14:43 IST)
Updated Date: Tue, 05 Jul 2022 (14:44 IST)
ಬೆಂಗಳೂರು : ಪಿಎಸ್ಐ ಪ್ರಕರಣ ಕಾಂಗ್ರೆಸ್ ಸರ್ಕಾರ ಇದ್ದಾಗ ನಡೆದಿರುತ್ತಿದ್ದರೆ, ಅವರು ವ್ಯವಸ್ಥಿತವಾಗಿ ಮುಚ್ಚಿ ಹಾಕುತ್ತಿದ್ದರು.
ಏಕೆಂದರೆ ಈ ಹಿಂದೆಯೂ ಅವರು ಇಂತಹ ಪ್ರಕರಣಗಳನ್ನು ಮುಚ್ಚಿ ಹಾಕಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾವು ವ್ಯವಸ್ಥೆಯನ್ನು ಸ್ವಚ್ಛ ಮಾಡಲು ಬಂದಿದ್ದೇವೆ. ನಮ್ಮ ಈ ಕೆಲಸ ಹೀಗೆಯೇ ಮುಂದುವರಿಯುತ್ತದೆ. ಗೃಹ ಸಚಿವ ಆರಗ ಜ್ಞಾನೇಂದ್ರ ದಕ್ಷತೆ, ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದಾರೆ.
ಇದರಿಂದಲೇ ಹಲವರ ಬಂಧನ ಆಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಆರಗ ಜ್ಞಾನೇಂದ್ರ ಅವರ ಪರ ಬ್ಯಾಟಿಂಗ್ ಮಾಡಿದರು. ಗೃಹ ಸಚಿವ ಸ್ಥಾನಕ್ಕೆ ಆರಗ ಜ್ಞಾನೇಂದ್ರ ರಾಜೀನಾಮೆ ನೀಡಬೇಕೆಂಬ ಡಿ.ಕೆ ಶಿವಕುಮಾರ್ ಆಗ್ರಹಕ್ಕೆ ಟಾಂಗ್ ನೀಡಿದ ಬೊಮ್ಮಾಯಿ, ಅವರ ಕಾಲದಲ್ಲೂ ಪಿಎಸ್ಐ ಹಗರಣ ಆಗಿತ್ತು.
ಪಿಎಸ್ಐ ನೇಮಕಾತಿ ಪ್ರಶ್ನೆ ಪತ್ರಿಕೆ ಲೀಕ್ ಆಗಿದ್ದು, ಹಿರಿಯ ಅಧಿಕಾರಿಯೇ ಆರೋಪಿಯಾಗಿದ್ದರು. ಆದರೆ ಅವರು ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ ಎಂದು ತಿರುಗೇಟು ನೀಡಿದರು.
.