Publish Date: Sun, 02 May 2021 (09:02 IST)
Updated Date: Sun, 02 May 2021 (09:03 IST)
ನವದೆಹಲಿ: ದೆಹಲಿಯಲ್ಲಿ ಆಕ್ಸಿಜನ್ ಕೊರತೆ ಉಂಟಾಗಿರುವ ಹಿನ್ನಲೆಯಲ್ಲಿ ಕೊರೋನಾ ರೋಗಿಗಳ ಸ್ಥಿತಿ ಶೋಚನೀಯವಾಗಿದ್ದು, ಈ ಬಗ್ಗೆ ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ದೆಹಲಿಗೆ ಸೂಕ್ತ ಸಮಯಕ್ಕೆ ಆಕ್ಸಿಜನ್ ಪೂರೈಕೆ ಮಾಡಿ. ಈ ರೀತಿ ಜನ ಸಾಯುವುದನ್ನು ನೋಡುವುದು ಖೇದಕರ. ದೆಹಲಿಗೆ 976 ಟನ್ ಆಕ್ಸಿಜನ್ ಸಿಗಬೇಕಿತ್ತು, ಆದರೆ ನಿನ್ನೆ ಕೇವಲ 312 ಟನ್ ಸಿಕ್ಕಿದೆ ಎಂದು ಸಿಎಂ ಕೇಜ್ರಿವಾಲ್ ದೂರಿದ್ದರು.
ಇದರ ಬೆನ್ನಲ್ಲೇ ಹೈಕೋರ್ಟ್ ಮಧ್ಯಪ್ರವೇಶಿಸಿದ್ದು, ದೆಹಲಿಗೆ ಕೊಡಬೇಕಾಗಿರುವ ಆಕ್ಸಿಜನ್ ನ್ನು ತಕ್ಷಣವೇ ಒದಗಿಸಿ. ಇದು ಪ್ರತಿಷ್ಠೆಯ ವಿಚಾರವಾಗಬಾರದು. ಕಳೆದ 10 ದಿನಗಳಿಂದ ಕೇಂದ್ರ ಈ ವಿಚಾರದಲ್ಲಿ ತಾರತಮ್ಯ ಮಾಡುವುದನ್ನು ನೋಡುತ್ತಿದ್ದೇವೆ. ಇದನ್ನು ಉಲ್ಲಂಘಿಸಿದರೆ ನ್ಯಾಯಾಲಯದ ಆದೇಶ ಉಲ್ಲಂಘಿಸಿದ ಪ್ರಕರಣವಾಗಿ ಪರಿಗಣಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.