Publish Date: Thu, 24 Feb 2022 (11:44 IST)
Updated Date: Thu, 24 Feb 2022 (08:03 IST)
ನವದೆಹಲಿ : ಪಾತ್ರೆ ತೊಳೆದಿಲ್ಲವೆಂದು ಅಮ್ಮ ಬೈದಳೆಂದು ಮಗಳು ಬಾಣಲೆಯಿಂದ ಹೊಡೆದು ಕೊಂದಿರುವ ಘಟನೆ ನೊಯ್ಡಾದಲ್ಲಿ ನಡೆದಿದೆ.
ಆ ಬಾಲಕಿಯ ವಿರುದ್ಧ ಸೆಕ್ಷನ್ 304ರ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ. ಆಕೆಯನ್ನು ಸುಧಾರಣಾ ಗೃಹಕ್ಕೆ (ಕರೆಕ್ಷನಲ್ ಹೋಮ್) ಕಳುಹಿಸಲಾಗಿದೆ ಎಂದು ನೊಯ್ಡಾ ಪೊಲೀಸರು ಮಾಹಿತಿ ನೀಡಿದ್ದಾರೆ.
ತಾಯಿ ತನ್ನ ಮಗಳಿಗೆ ಪಾತ್ರೆಗಳನ್ನು ತೊಳೆಯಲು ಹೇಳಿದ್ದಳು. ಆದರೆ ಆಕೆ ಪಾತ್ರೆ ತೊಳೆಯಲು ಒಪ್ಪಿರಲಿಲ್ಲ. ಇದರಿಂದ ಆಕೆ ತನ್ನ ಮಗಳಿಗೆ ಜೋರಾಗಿ ಬೈದಿದ್ದಳು. ಇದೇ ಕಾರಣಕ್ಕೆ ಅಮ್ಮ-ಮಗಳ ನಡುವೆ ದೊಡ್ಡ ಜಗಳವೇ ನಡೆದಿತ್ತು. ಅಮ್ಮ ತನಗೆ ಬೈದಿದ್ದರಿಂದ ಕೋಪಗೊಂಡ ಮಗಳು ತನ್ನ ತಾಯಿಯ ತಲೆಗೆ ಬಾಣಲೆಯಿಂದ ಹೊಡೆದಿದ್ದಾಳೆ.
ಮೂರ್ನಾಲ್ಕು ಬಾರಿ ಬಾಣಲೆಯಿಂದ ಆಕೆಯ ತಲೆಗೆ ಹೊಡೆದಿದ್ದಕ್ಕೆ ತೀವ್ರ ರಕ್ತ ಸೋರಿ ಆಕೆ ಕೆಳಗೆ ಬಿದ್ದಳು. ಅಮ್ಮನ ತಲೆಯಿಂದ ರಕ್ತ ಸುರಿಯುತ್ತಿರುವುದರಿಂದ ಭಯಗೊಂಡ ಆ ಬಾಲಕಿ ಗಾಬರಿಗೊಂಡು, ತಾನು ಆಗಷ್ಟೇ ವಾಕಿಂಗ್ನಿಂದ ಬಂದಿದ್ದಾಗಿಯೂ, ಅಷ್ಟರಲ್ಲಿ ಅಮ್ಮ ಗಾಯಗೊಂಡು ಕೆಳಗೆ ಬಿದ್ದಿದ್ದಾಗಿಯೂ ಪಕ್ಕದ ಮನೆಯವರಿಗೆ ಹೇಳಿ ಅವರನ್ನು ಕರೆಸಿಕೊಂಡಿದ್ದಳು.
ನನ್ನ ತಾಯಿಗೆ ಗಾಯವಾಗಿದೆ ಬನ್ನಿ ಎಂದು ನೆರೆಹೊರೆಯವರನ್ನು ಅಪಾರ್ಟ್ಮೆಂಟ್ಗೆ ಕರೆದಿದ್ದಳು. ಅಕ್ಕಪಕ್ಕದವರು ಬಂದು ನೋಡಿದಾಗ ಆ ಮಹಿಳೆಯ ದೇಹ ರಕ್ತಸಿಕ್ತವಾಗಿ ಬಿದ್ದಿತ್ತು. ಆಕೆಯ ತಲೆಗೆ ಗಾಯಗಳೂ ಆಗಿತ್ತು. ನೆರೆಹೊರೆಯವರು ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರು. ಅಷ್ಟರಲ್ಲಿ ಆ ಮಹಿಳೆ ಸಾವನ್ನಪ್ಪಿದ್ದರು.
ಅನುಮಾನಗೊಂಡು 14 ವರ್ಷದ ಬಾಲಕಿ ವಿಚಾರಿಸಿದಾ ತನ್ನ ತಾಯಿಯನ್ನು ಹೊಡೆದು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ. ಕೊಲೆಗೆ ಬಳಸಿದ ಬಾಣಲೆಯನ್ನೂ ವಶಪಡಿಸಿಕೊಂಡಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ರಣವಿಜಯ್ ಸಿಂಗ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.