Publish Date: Tue, 10 Feb 2026 (16:55 IST)
Updated Date: Tue, 10 Feb 2026 (16:58 IST)
ನವದೆಹಲಿ: ಸಂಸತ್ ಆವರಣದಲ್ಲಿ ಪ್ರಧಾನಿ ಮೋದಿ ಅವರ ವಿರುದ್ಧ ಕಾಂಗ್ರೆಸ್ ಸಂಸದರು ಆಕ್ಷೇಪಾರ್ಹ ಪೋಸ್ಟರ್ ಹೊತ್ತೊಯ್ದಿರುವುದು ಪ್ರಚೋದನಕಾರಿ ನೀತಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಕ್ರೋಶ ಹೊರಹಾಕಿದ್ದಾರೆ.
ಪ್ರಧಾನ ಮಂತ್ರಿ ಪೀಠದವರೆಗೂ, ಗದ್ದಲದ ನಡುವೆಯೂ ವಿರೋಧ ಪಕ್ಷದ ಸಂಸದರು ಎಲ್ಲಾ ಮಿತಿಗಳನ್ನು ದಾಟಿದ್ದಾರೆ. ಇವರದ್ದು ಚರ್ಚೆ ಅಥವಾ ಪ್ರತಭಟನೆಯಾಗಿರಲಿಲ್ಲ, ಇದು ಕೇವಲ ಉದ್ದೇಶಪೂರ್ವಕವಾದಂತಹ ಪ್ರಚೋದನೆಯಾಗಿತ್ತು ಎಂದು ಜೋಶಿ ಆರೋಪಿಸಿದ್ದಾರೆ.
ಒಬ್ಬ ಸಂಸದರಾಗಿರುವವರು ಸದನದ ಗೌರವನ್ನು ಕಾಪಾಡಿಕೊಳ್ಳುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ. ಆದರೆ, ಕಾಂಗ್ರೆಸ್ ಸಂಸದರ ನಡೆ ತೀವ್ರ ವಿರೋಧಾಭಾಸವಾಗಿದೆ ಎಂದು ಆಕ್ಷೇಪಿಸಿದ್ದಾರೆ.
ಸಂಸತ್ತಿನ ಆವರಣದೊಳಗೆ ಗೌರವಾನ್ವಿತ ಪ್ರಧಾನಿಯವರ ವಿರುದ್ಧ ಆಕ್ಷೇಪಾರ್ಹ ಪೋಸ್ಟರ್ಗಳನ್ನು ಹೊತ್ತೊಯ್ಯುವುದು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅದೆಷ್ಟು ಕೆಳಮಟ್ಟಕ್ಕೆ ಇಳಿಯುತ್ತಿದೆ ಎಂಬುದನ್ನು ತೋರಿಸುತ್ತದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನೂ ರಾಜ್ಯದ ಖಜಾನೆ ಖಾಲಿ ಮಾಡಿದವರು ಮೊದಲು ತಮ್ಮನ್ನೇ ಪ್ರಶ್ನೆ ಮಾಡಿಕೊಳ್ಳಲಿ. ಭಾರತ-ಅಮೆರಿಕ ವಾಣಿಜ್ಯ ಒಪ್ಪಂದ ಟೀಕಿಸುವ ಮೊದಲು ಸಿಎಂ ಸಿದ್ದರಾಮಯ್ಯ ಅವರು, ಆರ್ಥಿಕ ಸಂಪದ್ಭರಿತವಾಗಿದ್ದ ರಾಜ್ಯದ ಖಜಾನೆ ಖಾಲಿ ಮಾಡಿರುವ ಬಗ್ಗೆ ತಮ್ಮನ್ನೊಮ್ಮೆ ಪ್ರಶ್ನೆ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.
ಆರ್ಥಿಕ ಸಂಪತ್ತಿನಿಂದ ಕೂಡಿದ್ದ ಕರ್ನಾಟಕದ ಖಜಾನೆಯನ್ನು ಕಾಂಗ್ರೆಸ್ ಸರ್ಕಾರ ಇಂದು ಖಾಲಿ ಮಾಡಿದ್ದಲ್ಲದೆ, ಸಂಪೂರ್ಣ ಅಭಿವೃದ್ಧಿಯನ್ನು ಸ್ಥಗಿತಗೊಳಿಸಿದೆ. ಹೂಡಿಕೆದಾರರ ವಿಶ್ವಾಸವನ್ನು ಸಹ ಕಳೆದುಕೊಂಡಿದೆ. ಈ ವಿಚಾರಕ್ಕೆ ಸಿಎಂ ಉತ್ತಿರಸಬೇಕೆಂದರು.