Publish Date: Sat, 02 Nov 2024 (09:59 IST)
Updated Date: Sat, 02 Nov 2024 (10:03 IST)
ನವದೆಹಲಿ: ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಅಭಿವೃದ್ಧಿಯಾಗಿಲ್ಲ ಎಂದು ಟಾಂಗ್ ಕೊಟ್ಟಿದ್ದ ಪ್ರಧಾನಿ ಮೋದಿಗೆ ಕಾಂಗ್ರೆಸ್ ನಾಯಕರು ಗುಂಪಿನಲ್ಲಿ ಬಂದು ಗುಮ್ಮಿದ್ದಾರೆ. ಮೋದಿ ನಿನ್ನೆ ಮಾಡಿದ ಒಂದು ಟ್ವೀಟ್ ಗೆ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್ ನಾಯಕರೆಲ್ಲರೂ ಪೈಪೋಟಿಗೆ ಬಿದ್ದು ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ನಾಯಕ ಕೆಸಿ ವೇಣುಗೋಪಾಲ್ ಈ ಬಗ್ಗೆ ಪ್ರಶ್ನೆ ಮಾಡಿದ್ದು, ಸುಳ್ಳು ಭರವಸೆ, ಹಾದಿ ತಪ್ಪಿಸುವ ಪದಗಳ ಚಾಂಪಿಯನ್ ಆಗಿರುವ ಮೋದಿ ಕಾಂಗ್ರೆಸ್ ನ ಜನಪರ ಕೆಲಸಗಳನ್ನು ಪ್ರಶ್ನಿಸುವ ಧೈರ್ಯ ತೋರಿದ್ದಾರೆ. ಹಾಗಿದ್ದರೆ ಮೋದಿ ಜೀ, ಎಲ್ಲಿ ಹೋಯ್ತು ನಿಮ್ಮ ಅಚ್ಛೇ ದಿನ್? 2022 ರ ವೇಳೆಗೆ ಎಲ್ಲರಿಗೂ ಮನೆ, 100 ಸ್ಮಾರ್ಟ್ ಸಿಟಿ ನಿರ್ಮಾಣ ಮಾಡುತ್ತೇವೆ ಎಂದೆಲ್ಲಾ ನೀಡಿದ್ದ ಭರವಸೆಗಳ ಮೂಟೆ ಏನಾಗಿದೆ ಎಂದು ಪ್ರಶ್ನೆ ಮಾಡಿದ್ದಾರೆ.
ಇನ್ನು, ಇನ್ನೊಬ್ಬರ ಹಿರಿಯ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ ಕೂಡಾ ಮೋದಿಗೆ ಅಂಕಿ ಅಂಶ ಸಮೇತ ತಿರುಗೇಟು ನೀಡಿದ್ದಾರೆ. ಕರ್ನಾಟಕದ ಗ್ಯಾರಂಟಿ ಮಾಡೆಲ್ ಇಡೀ ದೇಶಕ್ಕೆ ಮಾದರಿಯಾಗಿದೆ. ನಿಮಗೆ ತಾಕತ್ತಿದ್ದರೆ ಇವುಗಳಲ್ಲಿ ಒಂದನ್ನಾದರೂ ನಿಮ್ಮ ಪಕ್ಷ ಆಡಳಿತವಿರುವ ರಾಜ್ಯಗಳಲ್ಲಿ ಜಾರಿಗೆ ತನ್ನಿ ಎಂದು ಸವಾಲು ಹಾಕಿದ್ದಾರೆ.
ಇನ್ನು, ರಾಜ್ಯ ಕಾಂಗ್ರೆಸ್ ನಾಯಕರೂ ಮೋದಿ ಟ್ವೀಟ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಗೃಹಸಚಿವ ಜಿ ಪರಮೇಶ್ವರ್ ಇದು ಹೊಟ್ಟೆ ಉರಿಗೆ ಮಾಡಿದ ಟ್ವೀಟ್ ಎಂದರೆ, ಡಿಕೆ ಶಿವಕುಮಾರ್ ನಮ್ಮ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ನಡೆಯುತ್ತಿವೆ. ಇದನ್ನು ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ ಎಂದಿದ್ದಾರೆ.